ಸುತ್ತೂರು: ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಸಂಸ್ಥಾಪನಾಚಾರ್ಯ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ೧೦೬೪ನೇ ಜಯಂತಿಯನ್ನು ಶ್ರೀ ಸುತ್ತೂರು ಕ್ಷೇತ್ರದಲ್ಲಿ ಇದೇ ಜ. ೧೦ ಬುಧವಾರದಂದು, ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ, ಪೂಜ್ಯ ಮಠಾಧೀಶರುಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಗುತ್ತದೆ.
ಪ್ರಾತಃಕಾಲ ೩.೦೦ ಗಂಟೆಗೆ ಕರ್ತೃಗದ್ದುಗೆಯಲ್ಲಿ ರುದ್ರಾಭಿಷೇಕ, ಸಹಸ್ರನಾಮಾವಳಿ, ಶಿವಾಷ್ಟೋತ್ತರ ಶಿವರಾತ್ರೀಶ್ವರ ಅಷ್ಟೋತ್ತರ ಇತ್ಯಾದಿ ವಿಶೇಷ ಪೂಜೆಗಳು ಹಾಗೂ ಆದಿಜಗದ್ಗುರುಗಳವರ ಉತ್ಸವಮೂರ್ತಿಗೆ ಷೋಡಶೋಪಚಾರ ಪೂಜೆ ನೆರವೇರುತ್ತದೆ. ಬೆಳಗ್ಗೆ ೯.೦೦ ಗಂಟೆಗೆ ಉತ್ಸವಮೂರ್ತಿಯನ್ನು ಗದ್ದುಗೆಯಿಂದ ಶ್ರೀಮಠಕ್ಕೆ ಬಿಜಯಂಗೈಸಲಾಗುತ್ತದೆ. ೯.೩೦ ಗಂಟೆಗೆ ಸಾಲಂಕೃತ ರಥದಲ್ಲಿ ಮೆರವಣಿಗೆ ಹೊರಟು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಶ್ರೀಮಠವನ್ನು ತಲುಪುತ್ತದೆ.
ಬೆಳಗ್ಗೆ ೯.೦೦ ಗಂಟೆಗೆ ಜೆಎಸ್ಎಸ್ ಕಲಾ ಮಂಟಪ ಹಾಗೂ ಶ್ರೀಕ್ಷೇತ್ರದ ಉಚಿತ ಶಾಲೆಯ ವಿದ್ಯಾರ್ಥಿಗಳಿಂದ ಗಾಯನ ಏರ್ಪಡಿಸಲಾಗಿದೆ. ೧೦.೩೦ಕ್ಕೆ ವಿವಿಧ ಪ್ರಶಸ್ತಿಗಳ ಪುರಸ್ಕೃತರಾಗಿರುವ ಗಣ್ಯರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಜ್ಯೋತಿಷ ಮಹಾಮಹೋಪಾಧ್ಯಾಯ ಸಿದ್ಧಾಂತಿ ಡಾ. ಕೆ.ಜಿ. ಪುಟ್ಟಹೊನ್ನಯ್ಯನವರು ಸಿದ್ಧಪಡಿಸಿ ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದಿಂದ ಪ್ರಕಟಿಸಿರುವ ಶ್ರೀ ಕ್ರೋಧಿ ಸಂವತ್ಸರದ ಸುತ್ತೂರು ಶ್ರೀ ಶಿವರಾತ್ರೀಶ್ವರ ಪಂಚಾಂಗ ಮತ್ತು ಜೆಎಸ್ಎಸ್ ಮಹಾವಿದ್ಯಾಪೀಠದ ಕನ್ನಡ ಮತ್ತು ಇಂಗ್ಲಿಷ್ ಟೇಬಲ್ ಕ್ಯಾಲೆಂಡರ್ಗಳು ಹಾಗೂ ಬೆಂಗಳೂರು ಶ್ರೀ ಚೈತನ್ಯ ಶಾಲೆಯ ವಿದ್ಯಾರ್ಥಿನಿ ಕು. ಕೆ. ನೇತ್ರಾ ಪರ್ಲ್ಸನ್ರವರು ರಚಿಸಿರುವ ಒನ್ ಮೈಂಡ್ ಗೇಮ್ ಕೃತಿಯನ್ನು ಬಿಡುಗಡೆ ಮಾಡಲಾಗುವುದು.
ಶಿವದೀಕ್ಷೆ-ಲಿಂಗದೀಕ್ಷೆ ಪಡೆಯಲಿಚ್ಛಿಸುವವರು ಜನವರಿ ೯ರಂದು ಮಂಗಳವಾರ ಸಂಜೆ ಶ್ರೀಕ್ಷೇತ್ರಕ್ಕೆ ಬಂದು ಹೆಸರು ದಾಯಿಸಿಕೊಳ್ಳಬೇಕು. ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಗುರು ಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ.