Saturday, April 19, 2025
Google search engine

Homeರಾಜ್ಯಸುದ್ದಿಜಾಲಜ. 26, 27, 28ರಂದು ಫಲಪುಷ್ಪ ಪ್ರದರ್ಶನ : ಅಗತ್ಯ ಸಿದ್ದತೆಗೆ ಜಿ.ಪಂ. ಸಿ.ಇ.ಒ ಸೂಚನೆ

ಜ. 26, 27, 28ರಂದು ಫಲಪುಷ್ಪ ಪ್ರದರ್ಶನ : ಅಗತ್ಯ ಸಿದ್ದತೆಗೆ ಜಿ.ಪಂ. ಸಿ.ಇ.ಒ ಸೂಚನೆ

ಚಾಮರಾಜನಗರ: ಇದೇ ತಿಂಗಳ 26, 27 ಹಾಗೂ 28ರಂದು ನಗರದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ಈ ಸಂಬಂಧ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು 2023-24ನೇ ಸಾಲಿನ ಫಲಪುಷ್ಪ (Flower Show) ಪ್ರದರ್ಶನ ಕಾರ್ಯಕ್ರಮ ಏರ್ಪಡಿಸುವ ಸಂಬಂಧ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಎನ್.ಆರ್.ಎಲ್.ಎಂ ಹಾಗೂ ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳು ಕಂಡುಬರದಂತೆ ಅಚ್ಚುಕಟ್ಟು ಆಯೋಜನೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಕೃಷಿ ಸಂಬಂಧಿತ ಇಲಾಖೆಗಳಾದ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳ ಕುರಿತು ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದೇ ಫಲಪುಷ್ಪ ಪ್ರದರ್ಶನದ ಉದ್ದೇಶವಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ಖಾಸಗಿ ಸಂಸ್ಥೆಗಳು ಸಹ ಸಹಭಾಗಿತ್ವ ನೀಡಲಿವೆ. ಈ ನಿಟ್ಟಿನಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಮಳಿಗೆಗಳನ್ನು ತೆರೆದು ಜನರಿಗೆ ವೈಜ್ಞಾನಿಕ ಮಾಹಿತಿಯ ಅರಿವು ಮೂಡಿಸಲು ಮುಂದಾಗಬೇಕು ಎಂದರು.

ತೋಟಗಾರಿಕೆ ಇಲಾಖೆಯಿಂದ ಆಧುನಿಕ ತಾಂತ್ರಿಕತೆಯುಳ್ಳ ಹನಿ ನೀರಾವರಿ ಪದ್ದತಿ, ಕೃಷಿ ಹೊಂಡ, ನೀರು ಸಂರಕ್ಷಣೆ, ಕೊಯ್ಲು, ಗ್ರೀನ್ ಹೌಸ್, ವಿವಿಧ ಹಣ್ಣಿನ ಮಾದರಿಗಳು, ಹೂವಿನ ಕಲಾಕೃತಿಗಳು, ತರಕಾರಿ ಕೆತ್ತನೆ, ಜೇನುಕೃಷಿ, ತಾರಸಿ ಕೈತೋಟ, ಕೃಷಿ ಇಲಾಖೆಯಿಂದ ಜಲಾನಯನ ಮಾದರಿ ಪ್ರಾತ್ಯೇಕ್ಷಿಕೆ ಹಾಗೂ ಸಿರಿಧಾನ್ಯ ಪ್ರದರ್ಶನ, ಮೀನುಗಾರಿಕೆ ಇಲಾಖೆಯಿಂದ ಬಯೋಫಿಕ್ ಮಾದರಿಯಲ್ಲಿ ಮೀನು ಸಾಕಾಣಿಕೆ, ರೇಷ್ಮೆ ಹಾಗೂ ಪಶುಪಾಲನಾ ಇಲಾಖೆಗಳಿಂದ ಆಧುನಿಕ ತಂತ್ರಜ್ಞಾನ, ತಳಿಗಳ ಪ್ರದರ್ಶನಗಳು ಇರಲಿವೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್‍ನ ರಾಷ್ಟ್ರೀಯ ಜೀವನೋಪಾಯ ಸಂವರ್ಧನಾ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಮಾರಾಟ ಮತ್ತು ಸ್ವಚ್ಚಭಾರತ್ ಮಿಷನ್ ಯೋಜನೆ, ಸ್ವೀಪ್ ಕಾರ್ಯಕ್ರಮ ಹಾಗೂ ಸರ್ಕಾರದ ಗೃಹಲಕ್ಷ್ಮೀ, ಯುವನಿಧಿ ಸೇರಿದಂತೆ ಗ್ಯಾರಂಟಿ ಯೋಜನೆಗಳು, ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಪೀಠಿಕೆ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುವಂತಿರಬೇಕು. ಒಟ್ಟಾರೆ ಫಲಪುಷ್ಪ ಪ್ರದರ್ಶನದ ಯಶಸ್ಸಿಗಾಗಿ ಸಂಬಂಧಿತ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅವಶ್ಯವಿರುವ ಪೂರ್ವಸಿದ್ದತಾ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ನಿರ್ದೇಶನ ನೀಡಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಿವಪ್ರಸಾದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಬೀಬ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular