ನವದೆಹಲಿ: ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿ 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಸೋಮವಾರ) ಪ್ರಕಟಿಸಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಈ ಪಟ್ಟಿಯನ್ನು ಹಿಂಪಡೆಯಲಾಗಿದೆ. ತಿದ್ದುಪಡಿಗಳ ನಂತರ ಶೀಘ್ರದಲ್ಲೇ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪುಲ್ವಾಮಾ ಜಿಲ್ಲೆಯ ರಾಜ್ಪೋರಾ ವಿಧಾನಸಭಾ ಕ್ಷೇತ್ರದಿಂದ ಅರ್ಷಿದ್ ಭಟ್, ಶೋಪಿಯಾನ್ನಿಂದ ಜಾವೇದ್ ಅಹ್ಮದ್ ಖಾದ್ರಿ, ಅನಂತನಾಗ್ ಪಶ್ಚಿಮದಿಂದ ಮೊಹಮ್ಮದ್ ರಫೀಕ್ ವಾನಿ, ಅನಂತನಾಗ್ನಿಂದ ಸೈಯದ್ ವಜಾಹತ್, ಕಿಶ್ತ್ವಾರ್ ವಿಧಾನಸಭೆ ಕ್ಷೇತ್ರದಿಂದ ಸುಶ್ರೀ ಶಗುನ್ ಪರಿಹಾರ್ ಮತ್ತು ದೋಡಾದಿಂದ ಗಜಯ್ ಸಿಂಗ್ ರಾಣಾ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು.
ರಿಯಾಸಿ ಕ್ಷೇತ್ರದಿಂದ ಕುಲದೀಪ್ ರಾಜ್ ದುಬೆ, ಮಾತಾ ವೈಷ್ಣೋದೇವಿ ಕ್ಷೇತ್ರದಿಂದ ರೋಹಿತ್, ಪೂಂಚ್ ಹವೇಲಿ ಕ್ಷೇತ್ರದಿಂದ ಚೌಧರಿ ಅಬ್ದುಲ್ ಘನಿ, ಉಧಮ್ಪುರ ಪಶ್ಚಿಮ ಕ್ಷೇತ್ರದಿಂದ ಪವನ್ ಗುಪ್ತಾ, ರಾಮಗಢ (ಎಸ್ಸಿ ಮೀಸಲು) ಕ್ಷೇತ್ರದಿಂದ ಡಾ. ದೇವಿಂದರ್ ಕುಮಾರ್ ಮಣಿಯಾಲ್ ಹಾಗೂ ಅಖ್ನೂರ್ ಕ್ಷೇತ್ರದಿಂದ ಮೋಹನ್ ಲಾಲ್ ಭಗತ್ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿತ್ತು.
ಒಟ್ಟು 90 ಕ್ಷೇತ್ರಗಳ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆಯ ಅಧಿಸೂಚನೆಯನ್ನು ಈಚೆಗೆ ಚುನಾವಣಾ ಆಯೋಗವು ಪ್ರಕಟಿಸಿದೆ. ಸೆ.18ರಂದು 24 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಸೆ. 25ರಂದು 2ನೇ ಹಂತ ಹಾಗೂ ಅ. 1ರಂದು ಮೂರನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ. ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಪಟ್ಟಿಯನ್ನು ತೆಗೆದುಹಾಕುವ ಮೊದಲು, ಪಕ್ಷವು ಮೊದಲ ಹಂತಕ್ಕೆ (ಸೆಪ್ಟೆಂಬರ್ ೧೮) ೧೫ ಅಭ್ಯರ್ಥಿಗಳನ್ನು, ಎರಡನೇ ಹಂತಕ್ಕೆ (ಸೆಪ್ಟೆಂಬರ್ ೨೫) ೧೦ ಅಭ್ಯರ್ಥಿಗಳನ್ನು ಮತ್ತು ಮೂರನೇ ಹಂತಕ್ಕೆ (ಅಕ್ಟೋಬರ್ ೧) ೧೯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ವಾಪಸ್ಸು ಪಡೆದ ಪಟ್ಟಿಯಲ್ಲಿ ಟಿಕೆಟ್ ಪಡೆದ ೧೪ ಮುಸ್ಲಿಮರಲ್ಲಿ ಎಂಟು ಮಂದಿ ಜಮ್ಮುವಿನ ಮುಸ್ಲಿಂ ಬಹುಸಂಖ್ಯಾತ ಸ್ಥಾನಗಳಿಂದ ಬಂದವರು, ಇದು ಈ ಕ್ಷೇತ್ರಗಳಿಗೆ ಪ್ರವೇಶಿಸುವ ಪಕ್ಷದ ಕಾರ್ಯತಂತ್ರವನ್ನು ಸೂಚಿಸುತ್ತದೆ.