ಗುಂಡ್ಲುಪೇಟೆ: ಕಸಕಲಪುರದ ಶ್ರೀ ಮಹಾಪಾರ್ವತಿ ಅಮ್ಮನವರ ಜಾತ್ರಾ ಮಹೋತ್ಸವ ತಾಲೂಕಿನ ಬರಗಿ ಗ್ರಾಮದಲ್ಲಿ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಬರಗಿ ಗ್ರಾಮಸ್ಥರು ಕೊಂಡೋತ್ಸವ ಮತ್ತು ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಗ್ರಾಮದಿಂದ ಛತ್ರಿ, ಚಾಮರ ಮುಂತಾದ ಸಕಲ ಮರ್ಯಾದೆಗಳು ಮತ್ತು ಕನ್ನಕನ್ನಡಿ, ನಂದಿ ಧ್ವಜ, ಮಂಗಳವಾದ್ಯದೊಂದಿಗೆ ಅಮ್ಮನವರ ಉತ್ಸವಮೂರ್ತಿ ಮತ್ತು ಆಭರಣಗಳೊಡನೆ ಅರಣ್ಯದಲ್ಲಿರುವ ದೇವಾಲಯಕ್ಕೆ ಕೊಂಡೋಯ್ದರು. ಅಲ್ಲಿ ಅಮ್ಮನವರ ಮೂರ್ತಿಯನ್ನು ಚಿನ್ನಾಭರಣಗಳು ಮತ್ತು ನಾನಾ ಬಗೆಯ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಬಾಯಿ ಬೀಗ, ಇತರೆ ಹರಕೆಗಳನ್ನು ಒಪ್ಪಿಸಲಾಯಿತು. ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ಕೊಂಡೋತ್ಸವ ಜರುಗಿತು. ನಂತರ ಎಡೆಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಿಸಿದ ನಂತರ ಗ್ರಾಮಸ್ಥರು ಗ್ರಾಮಕ್ಕೆ ವಾಪಸ್ಸಾದರು.
ಗ್ರಾಮದಲ್ಲಿ ಅಲಂಕೃತವಾದ ಹೂವಿನ ಮಂಟಪದಲ್ಲಿ ಅಮ್ಮನವರ ಉತ್ಸವ ಮೂರ್ತಿ ಇರಿಸಿ ಪೂಜೆ ಸಲ್ಲಿಸಲಾಯಿತು. ನಂತರ ನಂದಿಧ್ವಜ, ವೀರಭದ್ರ ಕುಣಿತ, ಮಂಗಳವಾದ್ಯ, ತಮಟೆ ಇತರೆ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. ಮೆರವಣಿಯಲ್ಲಿ ಯುವಕರು ಕಲಾತಂಡಗಳ ತಾಳಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು. ಮನೆ ಮುಂದೆ ರಂಗೋಲಿ ಹಾಕಿ ಉತ್ಸವ ಬರಮಾಡಿಕೊಂಡ ಜನರು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು. ಪ್ರತಿ ವರ್ಷದಂತೆ ತಾಲೂಕಿನ ನಾನಾ ಕಡೆಗಳಿಂದ ರೈತರು ತಮ್ಮ ಜಾನುವಾರುಗಳನ್ನು ಕರೆತಂದು ಪೆಂಜು ಹಚ್ಚುವ ಮೂಲಕ ಹರಕೆ ಪೂರೈಸಿದರು. ಜೊತೆಗೆ ಅನ್ನ ಸಂತರ್ಪಣೆ ಹಾಗು ಪ್ರಸಾದ ವಿನಿಯೋಗವೂ ಸಹ ನಡೆಯಿತು.
ಜಾತ್ರೆ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಘಟಕದ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಗುಂಡ್ಲುಪೇಟೆ ಠಾಣೆ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.