ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರ ಅವಧಿಯನ್ನು ರಾಜ್ಯ ಸರ್ಕಾರ ಎರಡನೇ ಬಾರಿಗೆ ವಿಸ್ತರಿಸಿದೆ. ಇದರಿಂದಾಗಿ ಬಹು ನಿರೀಕ್ಷಿತ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಫೆ. ೧೫ರವರೆಗೂ ಜಯಪ್ರಕಾಶ್ ಹೆಗಡೆ ಅವರ ಅವಧಿ ವಿಸ್ತರಿಸಲಾಗಿದ್ದು, ಇದರಿಂದಾಗಿ ಜಾತಿ ಗಣತಿ ವರದಿ ಸಲ್ಲಿಕೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.
೨೦೨೩ರ ನವಂಬರ್ ನಲ್ಲೇ ಜಯಪ್ರಕಾಶ್ ಹೆಗಡೆ ಅಧಿಕಾರದ ಅವಧಿ ಪೂರ್ಣಗೊಂಡಿತ್ತು. ಬಳಿಕ ೨೦೨೪ ರ ಜನವರಿ ೩೧ರವರೆಗೂ ಸರ್ಕಾರ ವಿಸ್ತರಿಸಿತ್ತು. ಈಗ ಆಯೋಗದಿಂದ ವರದಿ ಸ್ವೀಕರಿಸುವ ಹಿನ್ನೆಲೆಯಲ್ಲಿ ಫೆಬ್ರವರಿ ೧೫ರವರೆಗೂ ಮತ್ತೆ ವಿಸ್ತರಿಸಲಾಗಿದೆ.
ಚಿತ್ರದುರ್ಗದಲ್ಲಿ ನಡೆದ ಶೋಷಿತ ವರ್ಗದ ಜಾಗೃತಿ ಸಮಾವೇಶದಲ್ಲಿ ಕಾಂತರಾಜು ವರದಿ ಸ್ವೀಕರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು.