ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಸೋತಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಜನರೊಂದಿಗೆ ಜನತಾದಳ ಸಮಾವೇಶ ಜೆಡಿಎಸ್ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿತು. ಶಾಸಕ ಜಿ.ಟಿ.ದೇವೇಗೌಡರ ಅನುಪಸ್ಥಿತಿಯ ನಡುವೆಯೇ ಬೋಗಾದಿ ರಿಂಗ್ ರಸ್ತೆಯ ಬ್ಯಾಂಕರ್ಸ್ ಲೇಔಟ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತಾಡುವ ಕಾಂಗ್ರೆಸ್, ಮೂರು ವರ್ಷದಲ್ಲಿ ವಿದ್ಯುತ್, ಮದ್ಯ, ಬಸ್, ನೋಂದಣಿ ತೆರಿಗೆ ಏರಿಸಿದ್ದರ ಪಟ್ಟಿ ತೆಗೆಯಲಿ ಎಂದು ಸವಾಲು ಹಾಕಿದರು.ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಕುಮಾರಸ್ವಾಮಿ ಸಿಎಂ ಆಗಬೇಕೆಂಬುದು ನಾಡಿನ ಜನರ ಆಸೆ. ಅದು ಚಾಮುಂಡೇಶ್ವರಿಯಿಂದಲೇ ಆರಂಭವಾಗಲಿದೆ ಎಂದರು.
ಶಾಸಕ ಜಿ.ಡಿ.ಹರೀಶ್ಗೌಡ ಅವರು, 2028ಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಖಚಿತ. ಚಾಮುಂಡಿ ಆಶೀರ್ವಾದದಿಂದ ಎಚ್ಡಿಕೆ ಸಿಎಂ ಆಗುತ್ತಾರೆ. ರೈತ ಸಾಲಮನ್ನಾ, ಸಾರಾಯಿ ನಿಷೇಧ ಮಾಡಿದ ಎಚ್ಡಿಕೆ ಬಂದರೆ ರಾಜ್ಯಕ್ಕೆ ಒಳಿತು ಎಂದರು.ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುಡುಗಿ, ಮುಂದಿನ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ತರುವ ತನಕ ವಿರಮಿಸಲ್ಲ.
ಎರಡಂಕಿ ದಾಟಲ್ಲ ಎಂಬ ಸವಾಲು ಸ್ವೀಕರಿಸಿದ್ದೇವೆ. ರಾಜ್ಯಾದ್ಯಂತ ಪಕ್ಷ ಕಟ್ಟಿ ಅಧಿಕಾರಕ್ಕೆ ತರುತ್ತೇವೆ ಎಂದರು. ಸಮಾವೇಶದ ಮೂಲಕ ಯಾವುದಕ್ಕೂ ಹೆದರಬೇಡಿ, ನಾವು ನಿಮೊಂದಿಗಿದ್ದೇವೆ ಎಂಬ ಸಂದೇಶವನ್ನು ಕ್ಷೇತ್ರದ ಮುಖಂಡರು, ಕಾರ್ಯಕರ್ತರಿಗೆ ನೀಡಿದರು.



