ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಹತ್ತು ದಿನಗಳಿಂದ ಮುಷ್ಕರ ನಡೆಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಅವರು ಹೋರಾಟ ಮುಂದುವರಿಸಿದ್ದು ಇದರಿಂದ ರೈತರು ಮತ್ತು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.
ಬ್ಯಾಂಕಿನಲ್ಲಿ ಸಾಲ ಮತ್ತು ಇತರ ಸರ್ಕಾರದ ಸವಲತ್ತುಗಳನ್ನು ಪಡೆಯಲು ರೈತರಿಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಹಲವು ಧೃಢೀಕರಣ
ಪತ್ರಗಳ ಅಗತ್ಯವಿದ್ದು ಮುಷ್ಕರದ ಹಿನ್ನೆಲೆಯಲ್ಲಿ ಅವರ ಸೇವೆ ಲಭ್ಯವಿಲ್ಲದಿರುವುದರಿಂದ ಅವರ ಸಂಕಷ್ಟ ಹೇಳತೀರದಾಗಿದೆ.
ಇದರೊಂದಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ದರದ ಕೃಷಿ ಸಲಕರಣೆ ಮತ್ತು ಬಿತ್ತನೆ ಬೀಜಗಳನ್ನು ಪಡೆಯಲು ರೈತರು ಪರದಾಡುವಂತಾಗಿದ್ದು ನಿತ್ಯ ಅವರುಗಳು ಗ್ರಾಮ ಆಡಳಿತಾಧಿಕಾರಿಗಳ ಕಛೇರಿಗೆ ಅಲೆಯುತ್ತಿರುವ ಅವರನ್ನು
ಕೇಳುವವರು ಮತ್ತು ಹೇಳುವವರು ಯಾರು ಇಲ್ಲದಂತಾಗಿದೆ.
ಶಾಲಾ ವಿದ್ಯಾರ್ಥಿಗಳು ಸಿಇಟಿ ಮತ್ತು ಇತರ ಸರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಜಾತಿ ಮತ್ತು ಆದಾಯ ಪತ್ರ ಸೇರಿದಂತೆ ಹಲವು
ದಾಖಲಾತಿಗಳ ಅಗತ್ಯವಿದ್ದು ಅದಕ್ಕಾಗಿ ಅವರುಗಳು ಸಂಕಷ್ಟಕ್ಕೀಡಾಗಿದ್ದು ಇದರಿಂದ ಭವಿಷ್ಯದಲ್ಲಿ ಅವರಿಗೆ ತೊಂದರೆಯಾಗಲಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ವ್ಯಾಪಕ ಬೆಂಬಲ: ಗ್ರಾಮ ಆಡಳಿತಾಧಿಕಾರಿಗಳು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಮುಷ್ಕರಕ್ಕೆ ಚುನಾಯಿತ
ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೆ.ಆರ್.ನಗರ ಪಟ್ಟಣದ ತಾಲೂಕು ಕಛೇರಿ ಮುಂದೆ ಗ್ರಾಮ ಆಡಳಿತಾಧಿಕಾರಿಗಳ ತಾಲೂಕು ಅಧ್ಯಕ್ಷೆ ಕೆ.ಎಸ್.ಐಶ್ವರ್ಯ ಅವರ ಅಧ್ಯಕ್ಷೆಯಲ್ಲಿ
ನಡೆಯುತ್ತಿರುವ ಮುಷ್ಕರಕ್ಕೆ ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯರಾದ ಕೋಳಿಪ್ರಕಾಶ್, ಸಿ.ಶಂಕರ್, ತಾಲೂಕು ಸರ್ಕಾರಿ
ನೌಕರರ ಸಂಘದ ಅಧ್ಯಕ್ಷ ಡಾ.ಡಿ.ನಟರಾಜು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಎಂ.ಎಸ್.ಹರಿಚಿದಂಬರ, ಕುಳ್ಳಬೋರೇಗೌಡ, ಡಿ.ಆರ್.ರಾಹುಲ್, ಮಿರ್ಲೆಮಹೇಶ್, ಮಾಜಿ ಸದಸ್ಯ ಪರಶಿವಮೂರ್ತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ.