ಹನೂರು: ಕಡವೆಯನ್ನು ಬೇಟೆಯಾಡಿ ಮಾಂಸವನ್ನು ಸಾಗಾಣಿಕೆ ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸಿರುವ ರಾಮಾಪುರ ವನ್ಯಜೀವಿ ವಲಯಧಿಕಾರಿಗಳು ಬಂಧಿತರಿಂದ ಕಡವೆ ಮಾಂಸ, ನಾಡಬಂದೂಕು, ಕೃತ್ಯಕ್ಕೆ ಬಳಸಿದ ಉಪಕರಣಗಳನ್ನು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತಿನಲ್ಲಿರುವಾಗ ಕೋಣನಕೆರೆ ಕಡೆಯಿಂದ ಸರಕು ಸಾಗಾಣಿಕೆ ವಾಹನದಲ್ಲಿ ಅನುಮಾನಸ್ಪದವಾಗಿ ಬಂದವರನ್ನು ವಿಚಾರಿಸಿದಾಗ ಕಡವೆ ಬೇಟೆಯಾಡಿ ಮಾಂಸ ಸಾಗಾಣಿಕೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಬಸಪ್ಪನದೊಡ್ಡಿ ಗ್ರಾಮದ ಇರ್ಫಾನ್ ಬೇಗ್, ವಹೀದ್, ಅಂಬಿಕಾಪುರದ ಕುಮಾರಸ್ವಾಮಿ, ಅಪ್ಪು, ಕಾಂಚಳ್ಳಿ ಗ್ರಾಮದ ಯಶ್ವಂತ್, ಕುರುಬರದೊಡ್ಡಿ ಗ್ರಾಮದ ಸೈಯದ್ ಹ್ಯಾರಿಸ್ ನನ್ನು ಎಸಿಎಫ್ ಚಂದ್ರಶೇಖರ್ ಪಾಟೀಲ್ ಹಾಗೂ ರಾಮಾಪುರ ವಲಯ ಅರಣ್ಯಾಧಿಕಾರಿ ಕಾಂತರಾಜ್ ಎಸ್ ಚವ್ಹಾಣ್ ನೇತೃತ್ವದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.