ಚಾಮರಾಜನಗರ: ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮ ವಿಶೇಷ ನಟನೆ, ಗತ್ತು, ನೇರನುಡಿ ಹಾಗೂ ಕಲಾವಿದರ ಸಂಕಷ್ಟಗಳಿಗೆ ಸದಾ ಕಾಲ ಸಹಾಯನೀಡಿ ಕಲಿಯುಗದ ಕರ್ಣ ಎಂದೇ ಪ್ರಸಿದ್ಧರಾದ ಮಾನವೀಯ ಮೌಲ್ಯಗಳ ಸರದಾರ ಅಂಬರೀಷ್ ರವರನ್ನು ನೆನೆಯುವುದು ಕನ್ನಡಿಗರ ಕರ್ತವ್ಯವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಅಭಿಪ್ರಾಯ ಪಟ್ಟರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕನ್ನಡ ಚಲನಚಿತ್ರರಂಗಕ್ಕೆ ಅಂಬರೀಷ್ ರವರ ಕೊಡುಗೆಗಳು ಕುರಿತು ಮಾತನಾಡುತ್ತ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಕನ್ನಡ ಚಿತ್ರರಂಗಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಆಗಿ ಕರ್ನಾಟಕದ ಕರ್ಣನಾಗಿ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಸದಾ ಕಾಲ ಉಳಿದಿದ್ದಾರೆ.
ಪ್ರೀತಿ, ವಿಶ್ವಾಸ, ಸ್ನೇಹ, ಸಹಾಯ ಹಸ್ತಕ್ಕೆ ಅಂಬರೀಶ್ ರವರೇ ಸಾಟಿ. ಅಂಬರೀಶ್ ರವರು ಕನ್ನಡ ಚಲನಚಿತ್ರರಂಗದ ತ್ರಿಮೂರ್ತಿಗಳಲ್ಲಿ ಒಬ್ಬರು. ಡಾ.ರಾಜಕುಮಾರ್, ವಿಷ್ಣುವರ್ಧನ್,ಅಂಬರೀಶ್ ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಜಗತ್ತಿಗೆ ತಿಳಿಸಿ ತಮ್ಮ ನಟನೆ ಹಾಗೂ ಮಾನವೀಯ ಮೌಲ್ಯ ಕಾರ್ಯದ ಮೂಲಕ ಜನಪ್ರಿಯರಾದವರು. ಕಲಾವಿದರಾಗಿ ನಂತರ ರಾಜಕಾರಣಕ್ಕೆ ಪ್ರವೇಶಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ರಾಜ್ಯ ಸಚಿವರಾಗಿ ಅಪಾರ ಸೇವೆ ಸಲ್ಲಿಸಿದ ಅಂಬರೀಶ್ ರವರು ಪುಟ್ಟಣ್ಣ ಕಣಗಾಲ್ ರವರ ನಾಗರಹಾವು ಚಿತ್ರದ ಮೂಲಕ ತಮ್ಮ ನಟನೆಯ ಮೂಲಕ ಜನಪ್ರಿಯಗೊಂಡವರು.
ಚಕ್ರವ್ಯೂಹ, ಮಸಣದ ಹೂವು, ಅಂತ, ಒಲವಿನ ಉಡುಗೊರೆ, ಹೃದಯ ಹಾಡಿತು ಚಲನಚಿತ್ರಗಳು ಅಪಾರ ಜನಪ್ರಿಯತೆಯನ್ನು ತಂದು ಕೊಟ್ಟಿತು. ಮಂಡ್ಯದ ಗಂಡು ಅಂಬರೀಶ್ ಎಂದೆ ಜಗತ್ತಿಗೆ ಪರಿಚಿತರಾದ ಇವರು ತಮ್ಮ ವಿಶೇಷವಾದ ಗತ್ತು, ನೇರ ನುಡಿ ಹಾಗೂ ಸ್ಪಂದನೆಯ ಮೂಲಕ ಪ್ರತಿಯೊಬ್ಬರಿಗೂ ಹತ್ತಿರವಾದವರು.ಇವರಿಂದ ಮುಖಸ್ತುತಿ ಮಾಡಿಸಿಕೊಳ್ಳುವುದೇ ಅಭಿಮಾನಿಗಳಿಗೆ ಬಹಳ ಖುಷಿ ಕೊಡುತ್ತಿತ್ತು. ಜಾತಿ,ಮತ,ಧರ್ಮ ನೋಡದೆ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಅವರ ಹೃದಯ ಶ್ರೀಮಂತಿಕೆ ಮರೆಯಲಾಗದು . ರಾಜ್ಯ ಪ್ರಶಸ್ತಿ ಮತ್ತು ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದು ಉತ್ತುಂಗದಲ್ಲಿದ್ದರು ತಮ್ಮ ವಿಶೇಷ ನಡೆಯ ಮೂಲಕ ಸದಾ ಕಾಲ ಜನರ ಭಾವನೆಗಳಲ್ಲಿ ಬದುಕುತ್ತಿರುವ ಅಂಬರೀಶ್ ರವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನೂರಾರು ಕಲಾವಿದರಿಗೆ ಸಹಾಯ ಮಾಡಿರುವ ಅಂಬರೀಶ್ ರವರು ಶಾಶ್ವತವಾಗಿ ಕನ್ನಡಿಗರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದು ಋಗ್ವೇದಿ ವಿವರಿಸಿದರು.
ಅಂಬರೀಶ್ ರವರ ಕುರಿತು ಮುಖಂಡ ಹಾಗೂ ಜನಪದ ಕಲಾವಿದ ರವಿಚಂದ್ರ ಪ್ರಸಾದ್ ಕಹಳೆ ಮಾತನಾಡಿ ಅಂಬರೀಶ್ರವರ ಜೊತೆ ಓಡಾಡುವ ಅವಕಾಶ ನಮಗೆ ದೊರಕಿದ್ದು ವಿಶೇಷ. ಚಾಮರಾಜನಗರಕ್ಕೆ ಅವರನ್ನು ಕರೆತಂದು ಕನ್ನಡ ಸಂಘಟನೆಗಳು ಬೆಳ್ಳಿ ಕಿರೀಟ ಧಾರಣೆ ಮಾಡಿ ಸಾವಿರಾರು ಜನರ ಸಮ್ಮುಖದಲ್ಲಿ ನಾಗರಿಕ ಸನ್ಮಾನವನ್ನು ಮಾಡುವ ಮೂಲಕ ಚಾಮರಾಜನಗರ ಜನತೆ ಅವರಿಗೆ ಗೌರವವನ್ನು ಸಲ್ಲಿಸಿತ್ತು.ಅಂದು ಇಡೀ ನಗರ ಜನಸಾಗರದಲ್ಲಿ ಅಭಿಮಾನದ ಮುತ್ತುಗಳನ್ನು ನೀಡಿ ಆನಂದವನ್ನು ಕಂಡ ಕ್ಷಣ ಮರೆಯಲಾಗದು. ಅಂಬರೀಶ್ ರವರ ವ್ಯಕ್ತಿತ್ವ ಸ್ನೇಹಮಯವಾದದ್ದು. ವಿಷ್ಣುವರ್ಧನ್ ಮತ್ತು ಅಂಬರೀಶ್ ಅತ್ಯಂತ ಪ್ರಿಯವಾದ ಗೆಳೆಯರಾಗಿದ್ದರು. ವೃತ್ತಿಯಲ್ಲಿ ದ್ವೇಷ ಭಾವನೆ ತುಂಬಿರುವ ಕಾಲಘಟ್ಟದಲ್ಲಿ ವಿಷ್ಣುವರ್ಧನ್ ಮತ್ತು ಅಂಬರೀಶ್ ರವರ ಸ್ನೇಹ ಕಲಾವಿದರಿಗೆ ಮಾದರಿಯಾದ ಸ್ನೇಹ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಮುಖಂಡರು ಆದ ಶ್ರೀಮತಿ ಪದ್ಮ ಪುರುಷೋತ್ತಮ್ ಮಾತನಾಡಿ ಚಿತ್ರರಂಗದ ಮೂಲಕ ಜನರ ಹತ್ತಿರವಾದ ಅಂಬರೀಶ್ ಜನರಿಗೆ ಸದಾ ಕಾಲ ಸಹಾಯವನ್ನು ಮಾಡಿದವರು.ಅಂಬರೀಶ್ ರವರನ್ನು ಕನ್ನಡ ಸಾಹಿತ್ಯ ಪರಿಷತ್ತು ಅವರ ಕೊಡುಗೆಗಳ ಕುರಿತು ಕಾರ್ಯಕ್ರಮ ರೂಪಿಸಿರುವುದು ಬಹಳ ಉತ್ತಮವಾದದ್ದು. ಸಾಹಿತ್ಯ ಬೆಳವಣಿಗೆಗೆ ಚಿತ್ರರಂಗವು ಕಾರಣವಾಗಿದೆ ಎಂದು ತಿಳಿಸಿದರು.
ಗಾಯಕ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಶಿವಲಿಂಗ ಮೂರ್ತಿರವರು ಅಂಬರೀಶ್ ರವರ ಚಲನಚಿತ್ರದ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ,ಬಿಕೆ ಆರಾಧ್ಯ, ನವೀನ್,ಸುರೇಶ್ ದೊಡ್ಡ ಮೋಳೆ, ಧನಂಜಯ ಕುಮಾರ್ ಉಪಸ್ಥಿತರಿದ್ದರು.



