ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ನಗರದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡದ ದೀಪ ಹಚ್ಚೋಣ ಮನೆಮನೆಗಳಲ್ಲಿ ಕನ್ನಡ ಬೆಳಗಿಸೋಣ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಉದ್ಘಾಟನೆಯನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ವಿಶ್ವದ ಸುಂದರ ಭಾಷೆ. ಕನ್ನಡ ನಮ್ಮೆಲ್ಲರ ತಾಯಿಯ ಭಾಷೆಯಾಗಿದೆ. ತಾಯಿ ಭಾಷೆ ಆನಂದದ ಭಾಷೆ. ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಮನೆ ಮನೆಗಳಲ್ಲಿ ಕನ್ನಡ ದೀಪ ಹಚ್ಚೋಣ ಕಾರ್ಯಕ್ರಮವನ್ನು ರೂಪಿಸಿ ಕನ್ನಡ ಪುಸ್ತಕಗಳನ್ನು ಓದುವ ಮತ್ತು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಮೆಚ್ಚುಗೆಯ ಕಾರ್ಯಕ್ರಮ. ಯುವ ಪೀಳಿಗೆಗೆ ಕನ್ನಡದ ಜ್ಞಾನವನ್ನು ಪ್ರೀತಿಯನ್ನು ಪ್ರೇಮವನ್ನು ವಿಶ್ವಾಸವನ್ನು ನಂಬಿಕೆಯನ್ನು ಗಟ್ಟಿಗೊಳಿಸಬೇಕು .ಉದ್ಯೋಗ ಭಾಷೆಯಾಗಿ ಕನ್ನಡ ರೂಪಿತವಾಗಬೇಕು .ಆಗ ಮತ್ತಷ್ಟು ಸದೃಢಗೊಳ್ಳುತ್ತದೆ. ಕನ್ನಡ, ಸಂಸ್ಕೃತಿ ,ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು.
ಬ್ರಾಹ್ಮಿ ಮಹಿಳಾ ಸಂಘದ ಗೌರವ ಅಧ್ಯಕ್ಷರಾದ ವತ್ಸಲ ರಾಜಗೋಪಾಲ್ ಮಾತನಾಡಿ ಕನ್ನಡ ರಾಜ್ಯೋತ್ಸವ 69 ವರ್ಷಗಳ ಕಾಲದಿಂದಲೂ ನಡೆಯುತ್ತಿದೆ. ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಗೌರವ ಸಾವಿರಾರು ವರ್ಷಗಳಿಂದ ಇದೆ. ಮಹಿಳೆಯರು ಕನ್ನಡತನವನ್ನು ಹೆಚ್ಚು ಬೆಳೆಸಿಕೊಂಡಾಗ ಕನ್ನಡ ಮಾತೃ ರೂಪದಲ್ಲಿ ಯುವ ಪೀಳಿಗೆಗೆ ನೀಡ ಬೇಕು ಎಂದರು.
ಝಾನ್ಸಿ ಮಕ್ಕಳ ಪರಿಷತ್ತಿನ ಗೌರವಾಧ್ಯಕ್ಷರಾದ ಕುಸುಮ ಋಗ್ವೇದಿ ಮಾತನಾಡಿ ನವಂಬರ್ ಮಾಸ ಕನ್ನಡದ ಸಂಭ್ರಮದ ತಿಂಗಳಾಗಿದೆ. ಕನ್ನಡದ ಪುಸ್ತಕಗಳು ನಾಟಕಗಳು ,ಕಾದಂಬರಿಗಳು, ಪತ್ರಿಕೆಗಳು, ಚಲನಚಿತ್ರ ರಂಗಗಳು ಜನಪದ ,ಗಮಕ ಕಲೆ ,ವಾಸ್ತುಶಿಲ್ಪ ಸಂಗೀತ ,ನೃತ್ಯ, ವಾದ್ಯ ಪ್ರತಿ ಕ್ಷೇತ್ರದಲ್ಲೂ ವೈಶಿಷ್ಟವಾದ ಸಾಧಕರಿದ್ದಾರೆ. ಕನ್ನಡದ ಸಾಧಕರು ವಿಶ್ವದಲ್ಲಿ ಹೆಮ್ಮರವಾಗಿದ್ದಾರೆ. ಭಾಷೆ ಅಭಿಮಾನ ನಮ್ಮದಾಗಲಿ. ಕನ್ನಡದ ದೀಪ ಹಚ್ಚೋಣ . ಸಂತೋಷ ,ಸಂಭ್ರಮ ಆನಂದದಿಂದ ಕನ್ನಡ ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡೋಣ ಎಂದರು.
ಸಭೆಯ ಅಧ್ಯಕ್ಷತೆಯನ್ನು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸಿ ಮಾತನಾಡಿ ಕನ್ನಡ ಭಾಷೆಯ ಸೊಗಡು ಅದ್ಭುತವಾದದ್ದು. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ವಿಶ್ವ ಮಾನ್ಯರಾದ ಎಸ್ ಎಲ್ ಬೈರಪ್ಪನಂತವರು ಕನ್ನಡಿಗರು ಎಂಬ ಹೆಮ್ಮೆ ನಮ್ಮದು. ವಿಜ್ಞಾನ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಕನ್ನಡದ ಸಾಹಿತ್ಯ ಬೆಳೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯರಾದ ನಿವೃತ್ತ ಶಿಕ್ಷಕರ ರಾಜಗೋಪಾಲ್ ಸಂಜೀವಿನಿ ಟ್ರಸ್ಟ್ ನ ಗೌರಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಸತೀಶ್, ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಋಗ್ವೇದಿ ವಾಣಿಶ್ರೀ , ಶ್ರಾವ್ಯ ಋಗ್ವೇದಿ ನಾಗಶ್ರೀ , ಮಂಜುನಾಥ್ ಮಹದೇವಪ್ಪ,ಮುಂತಾದವರು ಉಪಸ್ಥಿತರಿದ್ದರು.