ಮೈಸೂರು: ಕಾಂತರಾಜ್ ವರದಿಯೇ ನನ್ನ ಕೈಸೇರಿಲ್ಲ. ಆಗಲೇ ವರದಿಗೆ ವಿರೋಧ ಎಂದರೆ ನಾನು ಏನು ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ನಗರದ ಮಂಡಕಳ್ಳಿ ಏರ್ಪೋರ್ಟ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂತರಾಜ್ ವರದಿಯಲ್ಲಿ ಏನಿದೆ ಎಂಬುದೇ ನನಗೆ ಗೊತ್ತಿಲ್ಲ. ಅಂಕಿ ಅಂಶವೇ ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡೋದು ಹೇಗೆ? ನವೆಂಬರ ಒಳಗೆ ಜಾತಿಗಣತಿ ವರದಿ ಕೊಡಬಹುದೆನೋ ಎಂದು ಹೇಳಿದ್ದಾರೆ.
ಕಾಂತರಾಜ್ ವರದಿಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪ ಒಂದು ಸವಕಲು ನಾಣ್ಯ. ಸವಕಲು ಅನ್ನೋ ಕಾರಣಕ್ಕೆ ಕೆ.ಎಸ್ .ಈಶ್ವರಪ್ಪಗೆ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪ ಮಾತುಗಳಿಗೆ ಬೆಲೆಯೇ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಕಾಂತರಾಜು ವರದಿ ಪರ ವಿಧಾನಸಭೆಯಲ್ಲಿ ಈಶ್ವರಪ್ಪ ಮಾತಾಡಿಲ್ವಾ? ಈಗ ವರದಿಯನ್ನು ಸುಟ್ಟು ಹಾಕುತ್ತೇವೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದ್ದಾರೆ. ಕೆ.ಎಸ್.ಈಶ್ವರಪ್ಪ ಮಾತಿಗೆ ಜಾಸ್ತಿ ಬೆಲೆ ಕೊಡಬೇಡಿ ಎಂದಿದ್ದಾರೆ.
ಸಿಎಂ ವಿಚಾರದಲ್ಲಿ ಇನ್ನು ಮುಂದೆ ಯಾರು ಹೇಳಿಕೆ ನೀಡಬೇಡಿ ಎಂದು ನಮ್ಮ ಶಾಸಕರು ಮತ್ತು ಸಚಿವರಿಗೆ ಹೇಳಿದ್ದೇನೆ. ನಿನ್ನೆ ಉಪಹಾರ ಸಭೆಯಲ್ಲಿ ಈ ಬಗ್ಗೆ ನಾನೇ ಪ್ರಸ್ತಾಪ ಮಾಡಿದ್ದೇನೆ. ಇನ್ನು ಮುಂದೆ ಯಾರು ಮಾತನಾಡಬೇಡಿ ಎಂದು ಎಲ್ಲರಿಗೂ ಹೇಳಿದ್ದೇನೆ. ಮುಂದಿನ ಚುನಾವಣೆ ಬಗ್ಗೆಯೂ ಕೆಲವು ನಿರ್ದೇಶನ ನೀಡಿದ್ದೇನೆ ಎಂದರು.