ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ಹೊಸ ಕಾಮಿಡಿ ಶೋ ಸದ್ಯದಲ್ಲೇ ವಿ4 ಚಾನೆಲ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಆಗಲಿದೆ. ಅವಿಕಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗಲಿರುವ ಈ ಕಾಮಿಡಿ ಶೋದಲ್ಲಿ ಹಿರಿಯ ಪ್ರಮುಖ ಹಾಸ್ಯ ಕಲಾವಿದರು ಕಾಣಿಸಿಕೊಳ್ಳಲಿದ್ದು, ಜತೆಗೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಾಗುವುದು ಎಂದು ತೆಲಿಕೆದ ಬೊಳ್ಳಿ ಖ್ಯಾತಿಯ ದೇವದಾಸ್ ಕಾಪಿಕಾಡ್ ತಿಳಿಸಿದರು.
ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಾಪಿಕಾಡ್ಸ್ ಕಾಮಿಡಿ ಜಂಕ್ಷನ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ತುಳು ರಂಗಭೂಮಿ, ಸಿನಿಮಾ ರಂಗ ಬೆಳೆಯಬೇಕಿದ್ದರೆ ಹೊಸ ತಲೆಮಾರಿನವರೂ ಸಕ್ರಿಯವಾಗಿ ತೊಡಗಿಕೊಳ್ಳಬೇಕಿದೆ. ಹೊಸ ತಲೆಮಾರಿನಲ್ಲಿ ಅಪಾರ ಪ್ರತಿಭೆಗಳಿದ್ದಾರೆ. ಅಂಥವರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಆಸೆಯಾಗಿದೆ. ಹಾಗಾಗಿ ಆಯ್ದ ಕೆಲವು ಪ್ರತಿಭೆಗಳಿಗೂ ಈ ಶೋದಲ್ಲಿ ಅವಕಾಶ ನೀಡಲಾಗುವುದು ಎಂದು ಕಾಪಿಕಾಡ್ ತಿಳಿಸಿದ್ದಾರೆ.
ಈಗಾಗಲೇ ಸುಮಾರು 15 ಎಪಿಸೋಡ್ ಸಿದ್ಧವಾಗಿದ್ದು, ವಿ4 ಚಾನೆಲ್ ಮೂಲಕ ಸಂಜೆ ಅರ್ಧ ತಾಸು ಪ್ರೇಕ್ಷಕರನ್ನು ರಂಜಿಸಲು ಈ ತಂಡ ಸಿದ್ಧವಾಗಿದೆ.
ದೇವದಾಸ್ ಕಾಪಿಕಾಡ್ ಅವರ ಪರಿಕಲ್ಪನೆಯಲ್ಲಿ ಅವರದ್ದೇ ಸಂಭಾಷಣೆಯನ್ನೂ ಹೊಂದಿರುವ ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಅತ್ಯಗತ್ಯವಾಗಿದೆ. ಇದರಿಂದ ಅನೇಕ ಯುವ ಪ್ರತಿಭೆಗಳಿಗೂ ಅವಕಾಶ ಸಿಗಲಿದೆ. ಇದು ಹೊಸಬರಿಗೆ ಮತ್ತು ತುಳು ರಂಗಭೂಮಿಗೆ ದೇವದಾಸ್ ಕಾಪಿಕಾಡ್ ಅವರ ವಿಶೇಷ ಕೊಡುಗೆಯಾಗಲಿದೆ.
ಸಮಾರಂಭದಲ್ಲಿ ಉದ್ಯಮಿ ಪ್ರಕಾಶ್ ಕುಂಪಲ, ಶರ್ಮಿಳಾ ದೇವದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್ ಮೊದಲಾದವರು ಉಪಸ್ಥಿತರಿದ್ದರು.
ಹೊಸ ಕಲಾವಿದರನ್ನು ಬೆಳಕಿಗೆ ತರುವ ಪ್ರಯತ್ನ: ಕಾಪಿಕಾಡ್
ಕಾಪಿಕಾಡ್ಸ್ ಜಂಕ್ಷನ್ ಅರ್ಧಗಂಟೆಯ ಹಾಸ್ಯ ಎಪಿಸೋಡ್ ನಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಹಾಸ್ಯ ಘಟನೆ ನಡೆಯುತ್ತದೆ. ನಿರಂತರವಾಗಿ ಟೆನ್ಶನ್ ನಲ್ಲಿ ಇರುವವರನ್ನು ನಗಿಸಬೇಕು ಎಂಬುದು ನಮ್ಮ ಉದ್ದೇಶ. ರಂಗಭೂಮಿ, ತುಳು ಸಿನಿಮಾರಂಗ ಉಳಿಯಬೇಕಾದರೆ ಕಿರಿಯ ತಲೆ ಮಾರಿನ ಕಲಾವಿದರಿಗೆ ಅವಕಾಶ ನೀಡಿ, ಪ್ರತಿಭಾವಂತ ಕಲಾವಿದರನ್ನು ಬೆಳಕಿಗೆ ತರಬೇಕು ಎಂಬ ಉದ್ದೇಶವನ್ನು ಇಟ್ಟು ಕೊಂಡಿದ್ದೇನೆ ಎಂದು ದೇವದಾಸ ಕಾಪಿಕಾಡ್ ತಿಳಿಸಿದರು.
ವರದಿ: ಶಂಶೀರ್ ಬುಡೋಳಿ



