ದಾವಣಗೆರೆ: ಕರ್ನಾಟಕ ಎಂದು ಪುನರ್ ನಾಮಕರಣ ಹೊಂದಿ ೫೦ ವರ್ಷಗಳಾಗುತ್ತಿದ್ದು ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ, ನಾಡಿನ ಭವ್ಯವಾಅದ ಇತಿಹಾಸ ಮತ್ತು ಸಂಸ್ಕೃತಿ, ಪರಂಪರೆಯನ್ನು ಯುವ ಜನತೆಗೆ ಮನನ ಮಾಡಿಕೊಡುವುದು ಇಂದಿನ ಅತ್ಯಗತ್ಯ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ೬೮ ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪಥಸಂಚನದಲ್ಲಿ ಗೌರವ ವಂದನೆ ಸ್ವೀಕರಿಸಿ ತಮ್ಮ ರಾಜ್ಯೋತ್ಸವ ಸಂದೇಶದಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವ ಕನ್ನಡಿಗರ ಹಬ್ಬ, ಇದನ್ನು ನಮ್ಮ ನಾಡು, ನುಡಿಯ ಹಿರಿಮೆ ಗರಿಮೆಗಳನ್ನು ಮನನ ಮಾಡಿಕೊಳ್ಳುವ ಪರಿಷೆ ಎಂದರೂ ತಪ್ಪಾಗಲಾರದು. ಇತಿಹಾಸ ಅರಿತವನು ಮಾತ್ರ ಇತಿಹಾಸವನ್ನು ನಿರ್ಮಿಸಲು ಸಾಧ್ಯ ಎಂಬ ಮಾತಿನಂತೆ, ನಮ್ಮ ನಾಡಿನ ಭವ್ಯವಾದ ಇತಿಹಾಸವನ್ನು ಮನನ ಮಾಡಿಕೊಡುವುದು ಈ ಸಂದರ್ಭದಲ್ಲಿ ಬಹು ಮುಖ್ಯವಾಗಿದೆ. ಕನ್ನಡ ಭಾಷೆ, ಕರ್ನಾಟಕದ ಉಗಮದ ಇತಿಹಾಸದತ್ತ ಕಣ್ಣಾಯಿಸಿದರೆ ಕನ್ನಡಿಗರದು ಸುಮಾರು ಎರಡುವರೆ ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ಕ್ರಿ.ಪೂ.೩ನೇ ಶತಮಾನದ ಸಾಮ್ರಾಟ ಅಶೋಕನ ಶಿಲಾಶಾಸನಗಳಲ್ಲಿ ಕನ್ನಡ ಪದಗಳ ಬಳಕೆಯು ಕಾಣಸಿಗುತ್ತದೆ. ನಂತರ ಶಾತವಾಹನರ ಆಳ್ವಿಕೆಯ ಕಾಲದಲ್ಲಿಯೂ ಕನ್ನಡ ಭಾಷೆಯ ಬಳಕೆಯನ್ನು ಕಾಣಬಹುದು ಎಂದು ಹೇಳಿದರು.
