ಮಂಡ್ಯ: ಪ್ರಪಂಚದ ಅನೇಕ ದೇಶಗಳಿಗೆ ಹೋದಾಗ ನಾವು ಕರ್ನಾಟಕದವರು ಅಂದರೆ ಬೆಂಗಳೂರಿನವರ ಎನ್ನುತ್ತಾರೆ . ಬೆಂಗಳೂರನ್ನು ಪ್ರಪಂಚದ ಉದ್ದಗಲಕ್ಕೂ ಪರಿಚಯಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದೊಂದಿಗೆ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಕಲಾಮಂದಿರಲ್ಲಿಂದು ಉದ್ಘಾಟಿಸಿ ಅವರು ಮಾತನಾಡಿದರು.
ಇವತ್ತಿಗೆ ನಾವು ಒಂದು ಜಿಲ್ಲೆ ರಚಿಸಬೇಕಾದರೆ ಸರ್ಕಾರ, ಸಾಹಿತಿಗಳು, ಸಾರ್ವಜನಿಕರು, ಪ್ರಗತಿಪರರೆಲ್ಲಾ ಸೇರಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಂಡು ರಚಿಸಬೇಕಾಗುತ್ತದೆ. ಕೆಂಪೇಗೌಡರು ಯಾವುದೇ ವಿವಾದಕ್ಕೆ ಅವಕಾಶ ಕೊಡದೆ ಈ ನಾಡಿನ ನೆಲ,ಜಲ, ಭಾಷೆ, ಜಾತಿಗೆ ಅನುಗುಣವಾಗಿ ಅಂದೇ ಬೆಂಗಳೂರನ್ನು ನಿರ್ಮಾಣ ಮಾಡಿ ನಮಗೆಲ್ಲಾ ಮಾದರಿಯಾಗಿದ್ದಾರೆ ಎಂದರು.
ಕೆಂಪೇಗೌಡರ ಸಾಧನೆಯನ್ನು ಯಾರು ಕೂಡ ಮಾಡಲು ಸಾಧ್ಯವಿಲ್ಲ. ಅವರ ಕಾರ್ಯಗಳಾದ ಕೆರೆಗಳ ನಿರ್ಮಾಣ, ಕೆರೆಯಲ್ಲಿ ಹೂಳು ತೆಗೆಯುವುದು, ಬೆಂಗಳೂರು ರಕ್ಷಣೆಗಾಗಿ ಕೋಟೆ ನಿರ್ಮಾಣಗಳ ಇತಿಹಾಸವನ್ನು ಇಂದಿನ ಯುವ ಪೀಳಿಗೆ ಅರಿಯಬೇಕಿದೆ ಎಂದರು.
ಮೈಸೂರು, ಮಂಡ್ಯ ಜನರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು, ಬೆಂಗಳೂರು ಹಾಗೂ ಸುತ್ತ ಮುತ್ತಲಿನ ಜನರು ಕೆಂಪೇಗೌಡರನ್ನು ಸ್ಮರಿಸಿಕೊಳ್ಳಬೇಕು. ಅವರ ಕೆಲಸ ಕಾರ್ಯಗಳಿಂದ ನಾವು ನೆಮ್ಮದಿಯಾಗಿ ಬದುಕುವುದಕ್ಕೆ ಸಾಧ್ಯವಾಗಿದೆ ಎಂದು ಇಬ್ಬರ ಕಾರ್ಯವನ್ನು ಸ್ಮರಿಸಿದರು. ಮಂಡ್ಯ ಅಭಿವೃದ್ಧಿಗೆ ನಾನೂ ಮತ್ತು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಸಾರ್ವಜನಿಕರು ಕೈಜೋಡಿಸಬೇಕು. ಎಲ್ಲಾರ ಸಹಕಾರದಿಂದ ಮಂಡ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೊಣ ಎಂದರು. ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ ಈ ಭಾಗದ ರೈತರು ಕಬ್ಬನ್ನು ಕಾರ್ಖಾನೆ ಸರಬರಾಜು ಮಾಡಬೇಕು. ಸಮಯಕ್ಕೆ ತಕ್ಕಂತೆ ಸರ್ಕಾರ ಅಗತ್ಯ ನೆರೆವುಗಳನ್ನು ಪೂರೈಸುತ್ತದೆ. ರೈತರು ಸಕ್ಕರೆ ಕಾರ್ಖಾನೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ. ರವಿಕುಮಾರ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರು ನಿರ್ಮಾಣ ಮಾಡಲಿಲ್ಲ ಎಂದಿದ್ದರೆ ನಮ್ಮ ಮಕ್ಕಳಿಗೆ ಅಷ್ಟು ದೊಡ್ಡ ನಗರದಲ್ಲಿ ಕೆಲಸ ಸಿಗುತ್ತಿರಲಿಲ್ಲ. ಯಾವುದೇ ತಾರತಮ್ಯವಿಲ್ಲದೇ ಎಲ್ಲಾ ಜಾತಿ ಜನಾಂಗಕ್ಕೂ ಬೆಂಗಳೂರನ್ನು ಕಟ್ಟಿದ್ದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.
ಮಂಡ್ಯ ಅಭಿವೃದ್ಧಿಗೆ ಎಲ್ಲಾ ಶಾಸಕರು ನಿಯೋಗವು ಬಜೆಟ್ನಲ್ಲಿ ೫೦೦ ಕೋಟಿ ನೀಡಿ ಎಂದು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಮಂಡ್ಯ ನಗರದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಹಾಗೂ ಬಡವಾಣೆಗಳ ನಿರ್ಮಾಣಕ್ಕೆ ಚಿಂತಿಸಲಾಗುತ್ತಿದ್ದು, ಇದಕ್ಕೆ ಸಚಿವರು ಕೈಜೋಡಿಸಬೇಕಿದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಮಧು ಜಿ ಮಾದೇಗೌಡ ಅವರು ಮಾತನಾಡಿ ಕೆಂಪೇಗೌಡರ ಜನಪರ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತವಾಗಿವೆ. ಕೆಂಪೇಗೌಡರ ರೀತಿ ಜನಪ್ರತಿನಿಧಿಗಳು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದರು. ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ ಅವರು ಮಾತನಾಡಿ ಕೆಂಪೇಗೌಡರ ಜಯಂತಿ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ, ಸರ್ಕಾರ ಕೆಂಪೇಗೌಡರ ದೂರದೃಷ್ಟಿಯನ್ನು ಮನಗಂಡು ಇಡೀ ರಾಜ್ಯಕ್ಕೆ ವಿಸ್ತರಿಸಿದೆ. ಗ್ರಾಮ ಹಾಗೂ ತಾಲ್ಲೂಕು ಮಟ್ಟದಲ್ಲಿ ಅವರ ಜೀವನ ಸಂದೇಶಗಳನ್ನು ತಿಳಿಸಬೇಕಿದೆ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರಾದ ಜಯರಾಂ ರಾಯಪುರ ಅವರು ಕೆಂಪೇಗೌಡರ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಂತರ ಒಕ್ಕಲಿಗ ಸಭಾದ ವತಿಯಿಂದ ಸಚಿವರಿಗೆ ಕೆಂಪೇಗೌಡರ ಜಯಂತಿ ಕುರಿತು ಮನವಿ ಪತ್ರ ಸಲ್ಲಿಸಲಾಯಿತು. ಇದೇ ವೇಳೆ ಸಿರಿಗೆ ಸೆರೆ ಪುಸ್ತಕದ ಕತೃ ಜಯರಾಂ ರಾಯಪುರ, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್ ಧನಂಜಯ ಅವರಿಗೆ ಸಚಿವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ಶಾಸಕರಾದ ಮರಿತಿಬ್ಬೆಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ ಸಿಇಓ ಶೇಕ್ ತನ್ವೀರ್ ಆಸಿಫ್, ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು, ಮಂಡ್ಯ ಹೆಚ್ಚುವರಿ ಉಪವಿಭಾಗಾಧಿಕಾರಿ ಎಂ.ಪಿ ಕೃಷ್ಣಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್, ಮುಖಂಡರಾದ ಎ.ಸಿ ರಮೇಶ್, ಸುಜಾತ ಕೃಷ್ಣ, ಸೇರಿದಂತೆ ಇನ್ನಿತರರು ಹಾಜರಿದ್ದರು.
