ಗುಂಡ್ಲುಪೇಟೆ: ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಿರ್ಮಾಣ ಮಾಡಿದರು ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಆಲತ್ತೂರು ಜಯರಾಮ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಕೆಂಪೇಗೌಡರು ಎಲ್ಲಾ ಸಮುದಾಯವನ್ನು ಸಮಾನ ಭಾವನೆಯಿಂದ ಗೌರವಿಸುತ್ತಿದ್ದರು. ಈ ಕಾರಣದಿಂದಲೇ ಬೆಂಗಳೂರಿನಲ್ಲಿ ಎಲ್ಲಾ ಸಮುದಾಯದವರು ಜೀವನ ಮಾಡಿಕೊಳ್ಳಲೆಂದು ಆಯಾ ಸಮುದಾಯದ ವೃತ್ತಿಗನುಗುಣವಾಗಿ ಮಾರುಕಟ್ಟೆ ಸೃಷ್ಟಿಸಿದರು ಎಂದು ತಿಳಿಸಿದರು.
ಧಾರ್ಮಿಕ, ಸಾಂಸ್ಕೃತಿಕ, ಜಾನಪದ ಕಲೆಗಳ ಬೆಳೆವಣಿಗೆ ಜೊತೆಗೆ ಎಲ್ಲಾ ಸಮುದಾಯದವರಿಗೆ ಅಧಿಕಾರ, ಶಿಕ್ಷಣ, ಸವಲತ್ತನ್ನು ನಾಡಪ್ರಭು ಕೆಂಪೇಗೌಡರು ನೀಡಿದ್ದಾರೆ. ಶಿಸ್ತುಬದ್ಧ ಆಡಳಿತ, ಯೋಜನೆಗಳ ಮೂಲಕ ಬಾಲ್ಯದಲ್ಲಿ ಕಂಡ ಜನಪರ ಕನಸನ್ನು ನನಸಾಗಿಸಲು ಕೆಂಪೇಗೌಡರ ತ್ಯಾಗ ಹಾಗೂ ಶ್ರಮವನ್ನು ಪ್ರತಿಯೊಬ್ಬರು ನೆನಪು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಮಹಾ ನಗರವಾಗಿ ರೂಪುಗೊಳ್ಳಲು ಕೆಂಪೇಗೌಡರು ಅಂದು ಹಾಕಿಕೊಟ್ಟ ಯೋಜನೆಗಳೇ ಕಾರಣ. ಇದರಿಂದ ದೇಶದಲ್ಲೆ ಇಂದು ಬೆಂಗಳೂರು ಎಲ್ಲರ ಗಮನ ಸೆಳೆಯುತ್ತಿದೆ. ಕರೆ-ಕಟ್ಟೆ ಸೇರಿದಂತೆ ಪ್ರತಿಯೊಂದು ಯೋಜನೆಯನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದ ಕಾರಣದಿಂದ ಭವ್ಯ ಬೆಂಗಳೂರಾಗಿದೆ. ಆದ್ದರಿಂದ ನಾಡಪ್ರಭು ಕೆಂಪೇಗೌಡ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ಸಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಜಯಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್, ಖಜಾನೆ ಶಾಖೆ ನಾಗರತ್ನ, ಸಿಡಿಪಿಓ ಹೇಮಾವತಿ, ಸರ್ವೇ ಇಲಾಖೆ ಅಧಿಕಾರಿ ರಮೇಶ್ ನಾಯಕ್, ಚೆಸ್ಕಾಂ ಎಇಇ ಸಿದ್ದಲಿಂಗಪ್ಪ, ಶಿರಸ್ತೇದಾರ್ ಮಹೇಶ್, ಬಿಸಿಯೂಟ ಮಂಜಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಹಲವು ಸಂಘಟನೆ ಮುಖಂಡರು ಹಾಜರಿದ್ದರು.