ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಲಾಲ್ ಭಾಗ್ನ ದಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ಬುಧವಾರ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ‘ಖಾದಿ ಉತ್ಸವ -2025’ ಉದ್ಘಾಟನೆಗೊಂಡಿತು.
ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಖಾದಿ ಉತ್ಸವದಲ್ಲಿ 42 ಖಾದಿ ಸಂಘಗಳು ಹಾಗೂ 24 ಗ್ರಾಮೀಣ ಕೈಗಾರಿಕೆಗಳ ಕಸುಬುದಾರರು ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಿಂದ ಭಾಗವಹಿಸಿದ್ದಾರೆ. 66 ಮಳಿಗೆಗಳನ್ನು ತೆರೆಯಲಾಗಿದೆ. ಉತ್ಸವ ಅ.24ರವರೆಗೆ ಇರಲಿದೆ. ಪ್ರದರ್ಶನದಲ್ಲಿ ಸಂಘ ಸಂಸ್ಥೆಗಳು ಉತ್ಪಾದಿಸಿರುವ ಅರಳೆ ಖಾದಿ, ರೇಷ್ಮೆ ಖಾದಿ, ಉಣ್ಣೆ ಬಟ್ಟೆಗಳು, ಶರ್ಟ್ಗಳು, ಕುರ್ತಗಳು, ಕಸೂತಿ ಬಟ್ಟೆಗಳು ಶೇ. 20ರಿಂದ ಶೆ.35ರವರೆಗೆ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಿವೆ.

ಇದೇ ವೇಳೆ ಮಾತನಾಡಿದ ಮಂಡಳಿಯ ಅಧ್ಯಕ್ಷ, ಶಾಸಕ ಬಸನಗೌಡ ತುರುವಿಹಾಳ, ಖಾದಿ ಕೇಂದ್ರ ಸ್ಥಾಪನೆಗೆ ಪಿಎಂಇಜಿಪಿ ಯೋಜನೆಯಡಿ ಸಹಾಯಧನದೊಂದಿಗೆ ಸಾಲ ಸೌಲಭ್ಯ, ರಾಜ್ಯ ಸರಕಾರದಿಂದ ನೆರವು ಒದಗಿಸಲಾಗುತ್ತದೆ ಎಂದರು. ಇದೇ ವೇಳೆ ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಡಿ.ಬಿ.ನಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಆರ್.ಯೋಗೇಶ್ ಉಪಸ್ಥಿತರಿದ್ದರು. ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಜಿತ್ ವಂದಿಸಿದರು. ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು.