ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ), ಮಂಗಳೂರು ಮತ್ತು ಕೆಎಂಸಿ ಆಸ್ಪತ್ರೆ, ಅತ್ತಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಠರಗರುಳಿನ ಕ್ಯಾನ್ಸರ್ (Gastrointestinal Cancers) ಕುರಿತಾದ ಎರಡು ದಿನಗಳ ಶೈಕ್ಷಣಿಕ ಸಮ್ಮೇಳನ ‘ಕೆಎಂಸಿ ಕ್ಯಾನ್ಸರ್ ಕಾನ್ಸೆವ್ 2026’ ಅನ್ನು ಜನವರಿ 31 ಮತ್ತು ಫೆಬ್ರವರಿ 1, 2026 ರಂದು ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಮರೆನಾ ಸ್ಪೋರ್ಟ್ಸ್ ಮತ್ತು ಇಂಡೋರ್ ಕಾಂಪ್ಲೆಕ್ಸ್ನಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನಾ ಸಮಿತಿಯ ಅಧ್ಯಕ್ಷರಾದ ಡಾ. ಎಂ. ಎಸ್. ಅತಿಯಾಮಾನ್ ತಿಳಿಸಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಮಾವೇಶದಲ್ಲಿ ಪ್ರಖ್ಯಾತ ಮೆಡಿಕಲ್, ರೇಡಿಯೇಶನ್ ಮತ್ತು ಸರ್ಜಿಕಲ್ ಅಂಕೊಲಾಜಿಸ್ಟ್ಗಳು, ಗ್ಯಾಸ್ಟೋಎಂಟರಾಲಜಿಸ್ಟ್ಗಳು, ಪೆಥಾಲಜಿಸ್ಟ್ಗಳು, ರೇಡಿಯಾಲಜಿಸ್ಟ್ಗಳು ಮತ್ತು ಇತರ ತಜ್ಞರು ಭಾಗವಹಿಸಲಿದ್ದಾರೆ. ವೈಜ್ಞಾನಿಕ ಕಾರ್ಯಕ್ರಮದಲ್ಲಿ ಉಪನ್ಯಾಸಗಳು, ಪ್ಯಾನಲ್ ಚರ್ಚೆಗಳು ಮತ್ತು ಪ್ರಕರಣ ಆಧಾರಿತ ಸಂವಾದಗಳು ನಡೆಯಲಿವೆ. ಈಗಾಗಲೇ 300 ಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದು, ಇದು. ಜಠರಗರುಳಿನ ಕ್ಯಾನ್ಸರ್ ಕ್ಷೇತ್ರದಲ್ಲಿ ಜ್ಞಾನ ವಿನಿಮಯಕ್ಕೆ ಪ್ರಮುಖ ವೇದಿಕೆಯಾಗಲಿದೆ ಎಂದರು.
ಜನವರಿ 31 ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಹೆ ಮಂಗಳೂರು ಕ್ಯಾಂಪಸ್ನ ಪ್ರೊ ವೈಸ್ ಚಾನ್ಸೆಲರ್ ಡಾ. ದಿಲೀಪ್ ಜಿ. ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಫೆಬ್ರವರಿ 1 ರಂದು ಬೆಳಿಗ್ಗೆ 6:00 ಗಂಟೆಗೆ ‘ಮಂಗಳೂರು ಕ್ಯಾನ್-ವಾಕ್’ ಜಾಗೃತಿ ನಡಿಗೆಯನ್ನು ಆಯೋಜಿಸಲಾಗಿದೆ” ಎಂದರು. ಈ ನಡಿಗೆಯಲ್ಲಿ ಕ್ಯಾನ್ಸರ್ ಗೆದ್ದವರು, ಆರೈಕೆದಾರರು, ವೈದ್ಯರು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಸೇರಿದಂತೆ ಸುಮಾರು 1,300 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಕ್ಯಾನ್ಸರ್ ಬಗ್ಗೆ ಇರುವ ಕಳಂಕವನ್ನು ಕಡಿಮೆ ಮಾಡುವುದು, ಆರಂಭಿಕ ಪತ್ತೆಗೆ ಉತ್ತೇಜನ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವುದು ಈ ನಡಿಗೆಯ ಉದ್ದೇಶವಾಗಿದೆ. ನಡಿಗೆಯ ಹಾದಿ: ಡಾ.ಟಿ.ಎಂ.ಎ ಪೈ ಇಂಟರ್ನ್ಯಾಷನಲ್ ಕನ್ವೆನ್ನನ್ ಸೆಂಟರ್ – ಪಿ.ವಿ.ಎಸ್ ಜಂಕ್ಷನ್ – ನವಭಾರತ್ ಸರ್ಕಲ್ – ಸಿಟಿ ಸೆಂಟರ್ -ಹಂಪನಕಟ್ಟೆ – ಕೆಎಂಸಿ ಲೈಟ್ಹೌಸ್ ಹಿಲ್ ರಸ್ತೆ ಕ್ಯಾಂಪಸ್ ವರೆಗೆ ಇರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಅಭಿಷೇಕ್ ಕೃಷ್ಣ ಉಪಸ್ಥಿತರಿದ್ದರು.
ವರದಿ: ಶಂಶೀರ್ ಬುಡೋಳಿ



