ಚಾಮರಾಜನಗರ: ಭಾಷೆ, ಶಬ್ದ ಭಂಡಾರ , ಪದಗಳ ಸಂಪತ್ತು, ಸಂಸ್ಕೃತಿ ,ಪರಂಪರೆ, ಜೀವನ ಮೌಲ್ಯಗಳು ,ಸನ್ಮಾರ್ಗದ ಹಾದಿಯನ್ನು ಅಳವಡಿಸಿಕೊಳ್ಳಲು ಪತ್ರಿಕೆಗಳು ನೀಡುವ ಜ್ಞಾನ ತುಂಬಾ ಅವಶ್ಯಕವಾಗಿದೆ. ಪತ್ರಿಕೆಗಳ ಮೂಲಕ ಮಾನವ ಸಮೃದ್ಧ ವಿಕಾಸ ವ್ಯಕ್ತಿತ್ವ ಪೂರಿತ ಜೀವನವನ್ನು ನಿರ್ವಹಣೆ ಮಾಡಬಹುದು ಎಂದು ಸಂಸ್ಕೃತಿ ಚಿಂತಕ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕೆಗಳ ಮಹತ್ವ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಸರ್ವರಿಗೂ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಮಾತನಾಡುತ್ತ, ಭಾಷೆ ನಿರಂತರವಾಗಿ ಬೆಳೆಯಲು ಪತ್ರಿಕೆಗಳು ಹಾಗೂ ಮಾಧ್ಯಮಗಳು ಪರಿಣಾಮಕಾರಿಯಾಗಿದೆ. ಭಾಷೆಗಳು ಬಳಕೆಇಲ್ಲದೆ ವಿನಾಶದತ್ತ ಸಾಗುತ್ತಿರುವ ಸಂದರ್ಭದಲ್ಲಿ ಪತ್ರಿಕೆಗಳು ಜೀವಂತ ಶಕ್ತಿಯಾಗಿ ಭಾಷೆ, ಸಂಸ್ಕೃತಿ ಬೆಳೆಯಲು ಮಹತ್ತರ ಕೊಡುಗೆಯನ್ನು ನೀಡಿದೆ. ರಾಷ್ಟ್ರ ಹಾಗೂ ರಾಜ್ಯಗಳ ವಿಕಾಸಕ್ಕೆ ಸಮಗ್ರ ಅಭಿವೃದ್ಧಿಗೆ ದೂರ ದೃಷ್ಟಿ, ಜ್ಞಾನ ದೃಷ್ಟಿಯ ವೈಚಾರಿಕ ಚಿಂತನೆಗಳ ,ಧಾರ್ಮಿಕ ಮೌಲ್ಯಗಳ ಹಾಗೂ ಜೀವನದ ಚಿಂತನೆಗಳ ರಹಸ್ಯಗಳನ್ನು ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಭಾವನೆ ಹಾಗೂ ಜ್ಞಾನವನ್ನು ಸಮಾಜಕ್ಕೆ ಅರ್ಪಿಸುವ ಪತ್ರಿಕೆಗಳು ಸಮಾಜದ ಕಣ್ಮಣಿಯಾಗಿವೆ. ಪತ್ರಿಕೆಗಳ ಮೂಲಕ ನಿರಂತರವಾಗಿ ನೂರಾರು ಸಮಸ್ಯೆಗಳ ನಡುವೆಯೂ ದುಡಿಯುತ್ತಿರುವ ಹಾಗೂ ಸೇವೆ ಸಲ್ಲಿಸುತ್ತಿರುವ ಸರ್ವರಿಗೂ ಅಭಿನಂದನೆಗೆ ಅರ್ಹರು. ಸಮಾಜ ಸದಾಕಾಲ ಇವರಿಗೆ ಚಿರಋಣಿಯಾಗಿರಬೇಕು. ಕನ್ನಡ ಸಾಹಿತ್ಯ ಪರಿಷತ್ತು ಭಾಷೆಯ ಬೆಳವಣಿಗೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಪತ್ರಿಕೆಗಳು ಸಾವಿರಾರು ಶಬ್ದಗಳ ವಿಶ್ಲೇಷಣೆಯ ಮೂಲಕ ಮಹಾನ್ ರಹಸ್ಯಗಳನ್ನು ಭವಿಷ್ಯದ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ . ಪತ್ರಿಕೆಗಳನ್ನು ಪ್ರೀತಿಸಿ ಜ್ಞಾನವನ್ನು ಅರಳಿಸಿಕೊಳ್ಳಿ ಎಂದು ಋಗ್ಬೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಹಾಗೂ ಪತ್ರಿಕ ವಿತರಕ ಶಿವಲಿಂಗ ಮೂರ್ತಿ ಮಾತನಾಡಿ ಪತ್ರಿಕೆಗಳು ಬಹಳ ಸಮಸ್ಯೆಯಲ್ಲಿದೆ. ಪತ್ರಿಕಾ ವರದಿಗಾರರು ,ವಿತರಕರು ಭದ್ರತೆ ಇಲ್ಲದ ಕಾರ್ಯನಿರ್ವಹಣೆ ನಡೆಸುತ್ತಿದ್ದಾರೆ. ಪತ್ರಕರ್ತರ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಸೇವೆಯನ್ನು ಸರ್ಕಾರ ಮತ್ತು ಸಮಾಜ ಭದ್ರಪಡಿಸಬೇಕಿದೆ. ಪತ್ರಿಕೆಗಳನ್ನು ಕೊಂಡು ಓದುವ ಮೂಲಕ ಪತ್ರಿಕೆ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.
ಕನ್ನಡ ಹೋರಾಟಗಾರರಾದ ಶ್ರೀನಿವಾಸಗೌಡರವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕಾ ದಿನಾಚರಣೆಯನ್ನು ಆಚರಿಸುವ ಮೂಲಕ ಪತ್ರಿಕಾ ಕ್ಷೇತ್ರದ ಸರ್ವರನ್ನು ಗೌರವಿಸಿ ಅವರಿಗೆ ಸಮಾಜದ ಪ್ರೀತಿ,ಹಾಗು ಸ್ಪೂರ್ತಿ ಸಲ್ಲಿಸುತ್ತಿರುವುದು ಬಹಳ ಸಂತೋಷವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಬಿಕೆ ಆರಾಧ್ಯ, ರವಿಚಂದ್ರಪ್ರಸಾದ್ ,ಸುರೇಶ್ ಗೌಡ, ಪರಮೇಶ್ವರಪ್ಪ, ಬೊಮ್ಮಾಯಿ ಪಣ್ಯದಹುಂಡಿ ರಾಜು ,ಬಂಡಿಗೆರೆ ಸಿದ್ದೇಶ್, ನಂಜುಂಡಸ್ವಾಮಿ, ಇದ್ದರು.