ಮಂಗಳೂರು (ದಕ್ಷಿಣ ಕನ್ನಡ): ಮಳೆ ಬಂದಿದ್ದರಿಂದ ಅಂಗಡಿಯೊಂದರ ಜಗಲಿಯಲ್ಲಿ ಕುಳಿತ ದಲಿತ ವೃದ್ಧನ ಮೇಲೆ ಅಂಗಡಿ ಮಾಲೀಕ ಜಾತಿ ನಿಂದನೆ ಮಾಡಿ ಮರದ ರೀಪ್ನಿಂದ ಗಾಯವಾಗುವವರೆಗೆ ಹಲ್ಲೆಗೈದಿರುವ ಘಟನೆ ದ.ಕ ಜಿಲ್ಲೆಯ ಕೊಕ್ಕಡದಲ್ಲಿ ನಡೆದಿದೆ.
ಕೊಕ್ಕಡ ಗ್ರಾಮದ ಮಂಚ ಮೊಗೇರ (67) ಹಲ್ಲೆಗೊಳಗಾದ ವ್ಯಕ್ತಿ. ಕೊಕ್ಕಡ ನಿವಾಸಿ ರಾಮಣ್ಣ ಗೌಡ ಹಲ್ಲೆ ನಡೆಸಿದ ಆರೋಪಿ. ಮಂಚ ಮೊಗೇರ ಕೊಕ್ಕಡ ಪೇಟೆಯಿಂದ ಹಿಂದಿರುಗುತ್ತಿದ್ದ ವೇಳೆ ಮಳೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು, ದಣಿವಾರಿಸಲು ಕೊಕ್ಕಡ ಹಳ್ಳಿಂಗೇರಿಯ ಅಂಗಡಿಯೊಂದರ ಜಗಲಿಯಲ್ಲಿ ಕುಳಿತಿದ್ದರು. ಅವರು ಕುಳಿತಿದ್ದನ್ನು ಪ್ರಶ್ನಿಸಿದ ಅಂಗಡಿ ಮಾಲಕ ರಾಮಣ್ಣ ಗೌಡ ಎದ್ದು ಹೋಗುವಂತೆ ತಿಳಿಸಿದ್ದಾರೆ. “ಸುಸ್ತಾದ ಕಾರಣಕ್ಕೆ ಕುಳಿತಿದ್ದೇನೆ ಮಳೆ ನಿಂತ ತಕ್ಷಣ ಹೊರಡುತ್ತೇನೆ” ಎಂದು ಮಂಚ ಮೊಗೇರ ಅವರು ತಿಳಿಸಿದ್ದರು ಎನ್ನಲಾಗಿದೆ.
ಆದರೆ ಅಂಗಡಿಯೊಳಗೆ ಹೋದ ರಾಮಣ್ಣ ಗೌಡ ಮರದ ರೀಪಿನೊಂದಿಗೆ ಬಂದು ಜಾತಿ ನಿಂದನೆ ಮಾಡಿದ್ದಲ್ಲದೇ, ತಲೆ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದಾನೆ ಎಂದು ಧರ್ಮಸ್ಥಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಗೆ ಒಳಗಾದ ಮಂಚ ಮೊಗೇರ ಅವರನ್ನು ಮನೆಯವರು ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ತಲೆಗೆ ಹಾಗೂ ಬೆನ್ನಿಗೆ ಗಾಯಗಳಾಗಿವೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.