ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ವ್ಯಾಪಕವಾಗಿ ಸದ್ದು ಮಾಡಿತ್ತು. ಈ ಪ್ರಕರಣದ ರೂವಾರಿ, ಭೂಗತ ಪಾತಕಿ ಕವಿರಾಜ್ ಎಂಬ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೇಶಾದ್ಯಂತ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ತಲೆ ಮರೆಸಿಕೊಂಡಿದ್ದಂತ 14 ಪ್ರಕರಣಗಳಲ್ಲಿ ಬೇಕಿದ್ದಂತ ಭೂಗತ ಪಾತಕಿ ಕವಿರಾಜ್ ನನ್ನು ಕೋಲಾರದ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯೇ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣದ ಮಾಸ್ಟರ್ ಮೈಂಡ್ ಎಂಬುದಾಗಿ ತಿಳಿದು ಬಂದಿದೆ.
ಬಂಧಿತ ಆರೋಪಿ ದೇಶದ ವಿವಿಧ ರಾಜ್ಯಗಳಲ್ಲಿ ಸುಮಾರು 14ಕ್ಕೂ ಹೆಚ್ಚು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದನು. ಅಲ್ಲದೇ ಭೂಗತ ಪಾತಕಿಗಳಾದಂತ ರವಿ ಪೂಜಾರಿ, ಮುತ್ತಪ್ಪ ರೈಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ.
ಇದಷ್ಟೇ ಅಲ್ಲದೆ ಬೆಂಗಳೂರಿನ ತಿಲಕ್ ನಗರ, ಕೆಂಗೇರಿ, ಆಡುಗೋಡಿ, ಕಾಮಾಕ್ಷಿ ಪಾಳ್ಯ, ಸರ್ಜಾಪುರ, ಕಾಡುಗೋಡಿ, ಇಂದಿರಾನಗರ, ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ದರೋಡೆ, ಕೊಲೆ, ಬೆದರಿಕೆ, ವಂಚನೆ, ಕಳ್ಳತನ ಕೇಸ್ ಗಳು ದಾಖಲಾಗಿದ್ದವು.
ಭೂಗತ ಪಾತಕಿಗಳ ಜೊತೆಗೆ ನಂಟು ಹೊಂದಿದ್ದಂತ ಕವಿರಾಜ್, ಪೊಲೀಸರ ಕೈಗೆ ಸಿಗದಂತೆ ನೇಪಾಳ ಗಡಿಯಲ್ಲಿನ ಉತ್ತರಾಖಂಡದಲ್ಲಿ ಅಡಗಿ ಕುಳಿತಿದ್ದನು. ಈ ಖಚಿತ ಮಾಹಿತಿ ಆಧರಿಸಿ ಕೋಲಾರ ಜಿಲ್ಲಾ ಸಿಇಎನ್ ಠಾಣೆಯ ಪೊಲೀಸರು ಜುಲೈ.31ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಆರೋಪಿ ಕವಿರಾಜ್ ನನ್ನು ಬಂಧಿಸಿದ್ದಾರೆ.