ಮೈಸೂರು: ಕೆಪಿಎಸ್ಸಿ ನಡೆಸಿದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಭಾಷಾಂತರ ಲೋಪಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು ಆಗಸ್ಟ್ನಲ್ಲಿ ಕೆಪಿಎಸ್ಸಿ ನಡೆಸಿದ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಭಾಷಾಂತರದಲ್ಲಿ ದೊಡ್ಡ ಮಟ್ಟದಲ್ಲಿ ಲೋಪವಾದ ಕಾರಣಕ್ಕೆ ಮರು ಪರೀಕ್ಷೆ ನಡೆದಿದೆ. ಆದರೆ ಇಲ್ಲಿಯೂ ಭಾಷಾಂತರ ಲೋಪ ಮತ್ತು ಒಎಂಆರ್ ಶೀಟ್ ಸಂಖ್ಯೆಗಳು ಅದಲು-ಬದಲಾಗಿ ಮತ್ತೊಂದು ಅನಾಹುತಕ್ಕೆ ಎಡೆ ಮಾಡಿದೆ. ಕನ್ನಡದ ಅಸ್ಮಿತೆ ಎಂದು ಸ್ವಯಂ ಘೋಷಿತವಾಗಿ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಸರ್ಕಾರ ಇಂದು ಲಕ್ಷಾಂತರ ಪರೀಕ್ಷಾರ್ಥಿಗಳ ಕನಸನ್ನು ನುಚ್ಚು ನೂರು ಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾತೃಭಾಷೆಯಲ್ಲೇ ಸರಿಯಾದ ಪ್ರಶ್ನೆಗಳನ್ನು ನೀಡುವಲ್ಲಿ ಮತ್ತು ಭಾಷಾಂತರಿಸುವುದರಲ್ಲಿ ಎರಡು ಬಾರಿ ವಿಫಲವಾಗಿರುವ ಸರ್ಕಾರ ಇನ್ನೆಷ್ಟು ಬಾರಿ ಉದ್ಯೋಗಾಕಾಂಕ್ಷಿಗಳ ಕನಸನ್ನು ನಾಶ ಮಾಡಲು ಹೊರಟಿದೆಯೋ? ಇಂತಹ ಗೊಂದಲಗಳೇ ಬೇಜವಾಬ್ದಾರಿತನದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ದೂರಿದ್ದಾರೆ.