ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದಲ್ಲಿ ಡಿ.೧೩ರಿಂದ ೨೧ರವರೆಗೆ ನಡೆಯುವ ಹನುಮ ಜಯಂತಿ ಆಚರಣೆಯನ್ನು ನಿಯಮ ಪಾಲಿಸುವುದರೊಂದಿಗೆ ಸರ್ವರ ಸಹಕಾರದಿಂದ ನಡೆಸುವಂತೆ ಸೂಚನೆ ನೀಡಲಾಗಿದೆ
ಎಂದು ಪೊಲೀಸ್ ಇನ್ಸ್ಪೆಕ್ಟರ್ ಎಸ್.ಶಿವಪ್ರಕಾಶ್ ತಿಳಿಸಿದರು.
ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹನುಮಜಯಂತಿ ಆಚರಣೆ ಸಂಬoಧ ಪೂರ್ವಭಾವಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಮಾಹಿತಿ ನೀಡಿದ ಅವರು ಶಾಂತಿ ಸುವ್ಯವಸ್ಥೆ ಭಂಗ ಬಾರದಂತೆ ೯ ದಿನಗಳ ನಿತ್ಯದ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲು ಮಾರುತಿ ಯುವಕರ ಸಂಘದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಒಪ್ಪಿದ್ದಾರೆ ಎಂದರು.
ಪ್ರತಿನಿತ್ಯ ನಡೆಸುವ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಪಡೆಯುವುದರ ಜತೆಗೆ ಠಾಣೆಗೆ ಅಗತ್ಯ ಮಾಹಿತಿ ನೀಡಲು ಸೂಚಿಸಲಾಗಿದ್ದು ಜಯಂತಿ ಆಚರಣೆ ಮಾಡಲು ಇಲಾಖೆ ವತಿಯಿಂದ ಎಲ್ಲಾ ಸಹಕಾರ ನೀಡಲಾಗುತ್ತದೆ ಎಂದ ಅವರು ಸಾರ್ವಜನಿಕರು ಅಗತ್ಯ ಪ್ರೋತ್ಸಾಹ ನೀಡಬೇಕೆಂದರು.
೨೧ರಂದು ಶನಿವಾರ ನಡೆಯುವ ನಮ್ಮೂರ ಹನುಮೋತ್ಸವ ಶೋಭಾಯಾತ್ರೆಯು ಅಂದು ಬೆಳಿಗ್ಗೆ ೧೦ ಗಂಟೆಗೆ ದೇವಾಲಯದಿಂದ ಹೊರಟು ಆನಂತರ ಬಜಾರ್ರಸ್ತೆ, ಗರುಡಗಂಭ ವೃತ್ತ, ಹಾಸನ-ಮೈಸೂರು ರಸ್ತೆಯ ಮೂಲಕ ಸಾಗಿ ಪುರಸಭೆ ವೃತ್ತದಲ್ಲಿ ತಿರುವು ಪಡೆದುಕೊಂಡು ಸಿಎಂ ರಸ್ತೆಯ ಮೂಲಕ ಮರಳಿ ದೇವಾಲಯದ ಬಳಿ ಬರಲಿದೆ ಎಂದರು.
ಶೋಭಾಯಾತ್ರೆಯಲ್ಲಿ ಅಂದಾಜು ೧೦ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಈ
ಸಂಬoಧ ಮತ್ತೊಮ್ಮೆ ಸಭೆ ನಡೆಸಿ ಸೂಕ್ತ ಬಂದೋ ಬಸ್ತ್ ನೀಡಲಾಗುತ್ತದೆ ಎಂದು ಎಸ್.ಶಿವಪ್ರಕಾಶ್ ಮಾಹಿತಿ ನೀಡಿದರು. ಪಿಎಸ್ಐ ಸ್ವಾಮೀಗೌಡ ಇದ್ದರು.