ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದ ಆಸ್ಪತ್ರೆಯಲ್ಲಿ ಈಗಿರುವ ೧೦೦ ಹಾಸಿಗೆಗಳ ಸೇವೆಯನ್ನು ೨೫೦ ಕ್ಕೆ ಏರಿಸಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ಕೆ.ಆರ್.ನಗರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಪಲ್ಸ್ ಪೋಲಿಯೊ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದಲ್ಲಿಯು ೧೦೦ ಹಾಸಿಗೆಯ ಚಿಕಿತ್ಸೆಯ ಸೇವೆಗೆ ಮೇಲ್ದರ್ಜೆಗೇರುವುದಾಗಿ ಪ್ರಕಟಿಸಿದರು.
ಭಾರತ ದೇಶ ಪೋಲಿಯೊ ಮುಕ್ತವಾಗಿದ್ದು ಇದು ಪ್ರತಿಯೊಬ್ಬರು ಸಂತಸ ಪಡುವ ವಿಚಾರವಾಗಿದ್ದು ಇದರ ಜತೆಗೆ ಇತರ ಕಾಯಿಲೆಗಳಿಂದಲು ನಾವು ಮುಕ್ತರಾಗಬೇಕು ಎಂದರು.
ದಶಕಗಳ ಕಾಲ ಪೋಲಿಯೊ ವಿರುದ್ದ ಹೋರಾಡಿ ಅದು ದೇಶದಲ್ಲಿ ಇಲ್ಲದಂತೆ ಮಾಡಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ವಿವಿದ ಸಂಘ ಸಂಸ್ಥೆಗಳು ಮತ್ತು ಇದಕ್ಕೆ ನಿರಂತರ ಸಹಕಾರ ನೀಡಿದ ಎಲ್ಲಾ ಸರ್ಕಾರಗಳ ಸೇವೆ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ.ಆರ್.ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉತ್ತಮ ಸೇವೆ ನೀಡುವಲ್ಲಿ ರಾಜ್ಯದಲ್ಲಿಯೆ ಎರಡನೇ ಸ್ಥಾನದಲ್ಲಿದ್ದು ಇದಕ್ಕೆ ಕಾರಣರಾಗಿರುವ ಇಲ್ಲಿನ ಸಿಬ್ಬಂದಿಯ ಸೇವೆ ಇತರರಿಗೆ ಮಾದರಿ ಎಂದು ಕೊಂಡಾಡಿದ ಶಾಸಕರು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೆ ಪೋಲಿಯೊ ಹನಿ ಹಾಕಿಸಬೇಕೆಂದು ಸಲಹೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮೂಲಭೂತ ಸವಲತ್ತುಗಳ ಕಾಮಗಾರಿಗೆ ಶಾಸಕರ ನಿಧಿಯಿಂದ ೧ ಕೋಟಿ ರುಗಳನ್ನು ಮೀಸಲಿಟ್ಟಿರುವುದಾಗಿ ಪ್ರಕಟಿಸಿದ ಡಿ.ರವಿಶಂಕರ್ ಬೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಿ ಇದರೊಂದಿಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಅಗತ್ಯವಿರುವ ಮೂಲ ಸವಲತ್ತು ಒದಗಿಸಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಮಾತನಾಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ೨,೬೨,೨೦೮ ಮಂದಿ ಜನಸಂಖ್ಯೆ ೧೭,೦೩೨ ಮಕ್ಕಳು ಮತ್ತು ೬,೨,೨೩೨ ಮನೆಗಳು ಇದ್ದು ೫ ಮನೆಗೊಂದು ಮಗು ಇದೆಯೆಂದು ತಿಳಿಸಿದರು.
ಇವರಲ್ಲಿ ಹೊರಗಿನಿಂದ ಬಂದ ೧೧೦ ಮಕ್ಕಳು ಸೇರಿದ್ದು ೨೦೯ ಹಳ್ಳಿಗಳಲ್ಲಿ ೬೪ ಉಪ-ಕೇಂದ್ರಗಳು ಹಾಗೂ ೩೪ ಗ್ರಾಮ ಪಂಚಾಯ್ತಿಗಳಲ್ಲಿ ೧೭೬ ವ್ಯಾಕ್ಸಿನ್ ಬೂತ್ಗಳಿಗೆ ೩೫೬ ತಂಡವನ್ನು ನಿಯೋಜಿಸಿದ್ದು ೭೪ ಮಂದಿ ಮೇಲ್ವಿಚಾರಕರ ಉಸ್ತುವಾರಿಯಲ್ಲಿ ೭೦೪ ಮಂದಿ ಪೋಲಿಯೊ ಹನಿ ಹಾಕಲಿದ್ದಾರೆಂದು ಮಾಹಿತಿ ನೀಡಿದರು.
ಪುರಸಭೆ ಸದಸ್ಯ ಕೋಳಿಪ್ರಕಾಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹೆಚ್.ಹೆಚ್.ನಾಗೇಂದ್ರ, ಲೋಕೇಶ್, ಸುರಕ್ಷಾ ಕ್ಲಬ್ ಅಧ್ಯಕ್ಷ ಜೆ.ಎಸ್.ಮಹೇಶ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ನಿರ್ದೇಶಕರಾದ ಕೆ.ಹೆಚ್.ಬುಸೀಗೌಡ, ಕೆ.ಎಂ.ಶ್ರೀನಿವಾಸ್, ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಅರುಣ್ ಬಿ.ನರಗುಂದ್, ಪದಾಧಿಕಾರಿಗಳಾದ ಕೆ.ವಿ.ಮೋಹನಕುಮಾರ್, ಶಶಿಭೂಷಣ್, ದಯಾನಂದ, ರವಿಶಂಕರ್, ತಹಸೀಲ್ದಾರ್ ಸಿ.ಎಸ್.ಪೂರ್ಣಿಮ, ತಾ.ಪಂ.ಇಒ ಜಿ.ಕೆ.ಹರೀಶ್, ಸಿಡಿಪಿಒ ಅಣ್ಣಯ್ಯ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಬಿ.ಜೆ.ನವೀನ್ ಮತ್ತಿತರರು ಇದ್ದರು.