ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಸುಮಾರು 18ಕ್ಕೂ ಅಧಿಕ ಮೊಬೈಲ್/ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, 4 ತಂತ್ರಾಂಶಗಳ ನಿರ್ವಹಣೆಗೆ ಹಲವಾರು ತೊಂದರೆಗಳಾಗುತ್ತಿವೆ. ಇವುಗಳ ನಿವಾರಣೆಗೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಆಡಳಿತ ಅಧಿಕಾರಿ (ವಿಎ)ಗಳ ಸಂಘದ ತಾಲೂಕು ಅಧ್ಯಕ್ಷೆ ಕೆ.ಎಸ್.ಐಶ್ವರ್ಯ ತಿಳಿಸಿದರು.
ಅವರು ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗ ಟೆಂಟ್ ಹಾಕಿ ಗ್ರಾಮ ಆಡಳಿತ ಅಧಿಕಾರಿಗಳೊಂದಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ಅವರು, 18ಕ್ಕೂ ಹೆಚ್ಚು ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಷನ್ಗಳ ಮೂಲಕ ಕೆಲಸ ಮಾಡಬೇಕಿದೆ. ಆದರೆ, ಇಲಾಖೆ ನಮಗೆ ಮೊಬೈಲ್, ಲ್ಯಾಪ್ಟಾಪ್ ಸೇರಿ ಯಾವುದೇ ಉಪಕರಣ ಕೊಟ್ಟಿಲ್ಲ. ಜತೆಗೆ ವಿಎಗಳಿಗೆ ನಿರ್ದಿಷ್ಟ ಕಚೇರಿಯನ್ನೂ ಗುರುತಿಸಿಲ್ಲ. ಪ್ರತಿದಿನ ಟಾರ್ಗೆಟ್, ಸಭೆ, ಎಂಬಿತ್ಯಾದಿ ಒತ್ತಡ ಹೇರಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ 50ಕ್ಕೂ ಹೆಚ್ಚು ವಿಎಗಳು ಮೃತಪಟ್ಟಿದ್ದಾರೆ ಎಂದು
ಆರೋಪಿಸಿದರು.
ಎಲ್ಲ ಮೊಬೈಲ್ ಆ್ಯಪ್ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಾನಸಿಕ ಹಾಗೂ ದೈಹಿಕ ವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿವೆ. ಆಧಾರ್ ಸೀಡೀಂಗ್, ಬಗರ್ ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆ್ಯಪ್ ಹೀಗೆ ಹತ್ತಾರು ಆ್ಯಪ್ಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡಬೇಕಿದೆ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತು ಹೋರಾಟಕ್ಕೆ ಮುಂದಾಗಿದ್ದೇವೆ ಹಾಗಾಗಿ ಸರ್ಕಾರ ನಮ್ಮ ಈ ಎಲ್ಲಾ ಬೇಡಿಕೆಯನ್ನು ಈಡೇರಿಸಲಿ ಎಂದರು.
ಎಲ್ಲರೂ ಸಹ ತಹಸೀಲ್ದಾರ್ ಕಚೇರಿಗಳಲ್ಲಿ ಕೆಲಸಕ್ಕೆ ಗೈರಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಇದಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದನೆ ನೀಡದಿದ್ದಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದರು.
ಬಳಿಕ ತಹಸೀಲ್ದಾರ್ ಜೆ ಸುರೇಂದ್ರಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷ ಕೆ.ಎಂ.ರಜಿತ್, ತಾಲ್ಲೂಕು ನೌಕರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್ ಕುಮಾರ್, ಗ್ರಾಮ ಸಹಾಯಕ ಸಂಘದ ತಾ. ಅಧ್ಯಕ್ಷ ಬಿ.ಎಸ್.ರಮೇಶ್, ಖಜಾಂಚಿ ಜ್ಯೋತಿ ಪಾಟೀಲ್, ಗ್ರಾಮ ಸಹಾಯಕ ಸಂಘದ ತಾ.ಖಜಾಂಚಿ ಸೋಮಶೇಖರ್, ಗ್ರಾಮ ಆಡಳಿತ ಅಧಿಕಾರಿಗಳಾದ ಮಹಮ್ಮದ್ ಅಜರ್, ನವೀನ, ಡಿ.ಸಿ.ರಾಜಗೋಪಾಲ್, ಹೆಚ್.ಎನ್.ಅರುಣ, ಬಲರಾಮ, ಶಿವುಚಂದ್ರ, ದರ್ಶನ್, ಮೂರ್ತಿ, ರಾಜಯ್ಯ ಸೇರಿದಂತೆ ತಾ ಆಡಳಿತ ಅಧಿಕಾರಿಗಳ ಸಂಘದ ಸದಸ್ಯರು, ಗ್ರಾಮ ಸಹಾಯಕ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.