ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವಿವಿಧ ವೃಂದಗಳ ನೌಕರರಿಗೆ ಸಕಾಲಕ್ಕೆ ಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ನೌಕರರು ಮತ್ತು ಸದಸ್ಯರು ಆರಂಭಿಸಿರುವ ಮುಷ್ಕರದಿಂದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನಲ್ಲಿ ಗ್ರಾ.ಪಂ.ನ ಎಲ್ಲಾ ಸೇವೆಗಳು ಸ್ಥಗಿತ ಗೊಂಡಿವೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಈ ಎರಡು ತಾಲೂಕುಗಳ ಸುಮಾರು 34 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕರವಸೂಲಿಗಾರರು, ಗುಮಾಸ್ತರು ಮತ್ತು ಡಾಟಾ ಎಂಟ್ರಿ ಆಪರೇಟರ್ಗಳು, ನೀರಗಂಟೆಗಳು, ಜವಾನರು, ಸ್ವಚ್ಛತಾ ಕೆಲಸಗಾರರು. ದ್ವಿತೀಯ ದರ್ಜೆ ಸಹಾಯಕರು, ಗ್ರಾಮೀ- ಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗೆಜೆಟೆಡ್ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದಾರೆ.
ರಾಜ್ಯ ಸರ್ಕಾರವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ‘ಬಿ’ ಗುಂಪಿನ ಹುದ್ದೆಗಳಾಗಿ ಉನ್ನತೀಕರಿಸಬೇಕು, ಜೇಷ್ಠತಾ ಪಟ್ಟಿ ಅಂತಿಮಗೊಳಿಸಬೇಕು, ವಿವಿಧ ವೃಂದಗಳ ನೌಕರರಿಗೆ ಸಕಾಲಕ್ಕೆ ಬಡ್ತಿ ನೀಡಬೇಕು, ಕಾರ್ಮಿಕರ ರಾಜ್ಯ ವಿಮೆ ಮತ್ತು ಭವಿಷ್ಯ ನಿಧಿ ನೀಡಬೇಕು ಹಾಗೂ ನೇರ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು ಎಂದು ಕರೆ ನೀಡಲಾಗಿರುವ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ಸದ್ಯ ಧರಣಿ ಕೈಬಿಡುವಂತೆ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ನೌಕರರು, ಸದಸ್ಯರನ್ನು ಮನವೊಲಿಸಲು ಮುಂದಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರು ಹೋರಾಟದ ನೇತೃತ್ವ ವಹಿಸಿದ್ದವರ ಜೊತೆ ಶುಕ್ರವಾರ ಚರ್ಚಿಸಿದರು ಕೂಡ ಮಾತು ಕಥೆ ಫಲಪ್ರದ ಕಾಣದೇ ಶನಿವಾರವು ಕೂಡ ಧರಣಿ ಮುಂದುವರಿದೆ.
ಇದರಿಂದ ಗ್ರಾ.ಪಂ.ನಿಂದ ಸಿಗಬೇಕಾದ ನರೇಗಾ ಯೋಜನೆ, ಈ ಸ್ವತ್ತು ,ಜನನ ಮರಣ ನೊಂದಾಣಿ ,ಸ್ವಚ್ಛ ಭಾರತ್ ಯೋಜನೆವಸತಿ ಯೋಜನೆಗಳ ಜಿಪಿಎಸ್ ಸೇರಿದಂತೆ ಇನ್ನಿತರ ಆನ್ಲೈನ್ ಸೇವೆಗಳು ಸ್ಥಗಿತ ಗೊಂಡಿದ್ದು ಈ ಕಾರಣಕ್ಕೆ ಸಾರ್ವಜನಿಕರು ಈ ಗ್ರಾ.ಪಂ.ಗಳಿಗೆ ಬೇಟಿ ನೀಡಿ ಯಾರು ಇಲ್ಲದೇ ಸೇವೆಗಳು ಸಿಗದೇ ನಿರಾಸೆಯಿಂದ ವಾಪಸ್ ಆಗಬೇಕಾಯಿತು.

ಪ್ರತಿಭಟನೆಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ಪಿಡಿಓ ಸಂಘದ ಅಧ್ಯಕ್ಷ ಕೆ.ಎನ್.ಭಾಸ್ಕರ್, ಕರವಸೂಲಿಗಾರರ ಸಂಘದ ಅಧ್ಯಕ್ಷ ಮಂಜುನಾಥ,ಡಿಇಓ ಸಂಘದ ಅಧ್ಯಕ್ಷ ಡಿ.ಎಚ್.ಹರೀಶ್ ರಾಘವೇಂದ್ರ, ನೀರುಗಂಟಿಗಳ ಸಂಘದ ಅಧ್ಯಕ್ಷ ಪುಟ್ಟ ಸೋಮಪ್ಪ ಸೇರಿದಂತೆ ಮತ್ತಿತರರು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಸರ್ಕಾರವು ಇವರ ಬೇಡಿಕೆಗೆ ಒಪ್ಪಿಗೆ ಸೂಚಿಸದೇ ಹೋದರೆ ಧರಣಿ ಮುಂದುವರಿಯುವ ಸಾಧ್ಯತೆಗಳಿದ್ದು ಇದರಿಂದ ಗ್ರಾಮ ಪಂಚಾಯಿತಿಯ ಸಾರ್ವಜನಿಕರ ಸೇವೆಗಳು ಧರಣಿ ಮುಗಿಯುವ ವರಿಗೂ ಸ್ಥಗಿತ ಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಈ ಹೋರಾಟಕ್ಕೆ ಬೆಂಬಲ ನೀಡಿರುವ ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾ.ಪಂ.ಅಧ್ಯಕ್ಷೆ ರೇಖಾ ಜಗದೀಶ್ ಗ್ರಾ.ಪಂ.ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೇಳಿರುವ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು ತಕ್ಷಣವೇ ಇವುಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕೆಂದು ಹೇಳಿದರು.