ಶಿವಮೊಗ್ಗ: ಪಕ್ಷದ ವೇದಿಕೆಯಲ್ಲೇ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ. ಬ್ರಹ್ಮ ಬಂದರು ನಾನು ವಾಪಸ್ ತೆಗೆದುಕೊಳ್ಳವುದಿಲ್ಲ,ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪುನರುಚ್ಚರಿಸಿದ್ದಾರೆ.
ಇಂದು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನನ್ನ ಸ್ಪರ್ಧೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಶಿವಮೊಗ್ಗ ಲೋಕಸಭೆ ಕ್ಷೇತ್ರ ಗೆಲ್ಲುತ್ತೇನೆ. ಗೆದ್ದು ನಾನು ಮೋದಿಗೆ ಬೆಂಬಲ ನೀಡುತ್ತೇನೆ ಎಂದರು. ಒಂದು ಕುಟುಂಬದ ಕೈಯಲ್ಲಿ ರಾಜ್ಯ ಬಿಜೆಪಿ ಸಿಕ್ಕಿದೆ. ಅದರಿಂದ ಪಕ್ಷ ಹೊರ ತರಬೇಕಿದೆ. ಹಾಲಿ ಸಂಸದರ ಬಗ್ಗೆ ಕ್ಷೇತ್ರದಲ್ಲಿ ಆಕ್ರೋಶವಿದೆ. ನನ್ನ ಬಗ್ಗೆ ಕ್ಷೇತ್ರದ ಜನರಿಗೆ ಪ್ರೀತಿಯಿದೆ. ನನಗೆ ಆದ ಅನ್ಯಾಯವನ್ನು ಖಂಡಿಸಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮುಖಂಡರು ಬೆಂಬಲ ನೀಡುತ್ತಿದ್ದಾರೆ ಎಂದರು.
ಯಡಿಯೂರಪ್ಪನವರು ಹಿಂದುತ್ವ ಹೋರಾಟದ ನಾಯಕರನ್ನು ಪಕ್ಕಕ್ಕೆ ಸರಿಸಿದ್ದಾರೆ. ಮನೆಯಲ್ಲಿ ಒಬ್ಬರು ಕೇಂದ್ರ ಚುನಾವಣಾ ಸಮಿತಿ ಸದಸ್ಯರು , ಒಬ್ಬ ಎಂಪಿ ಹಾಗೂ ಮತ್ತೊಬ್ಬ ಎಂಎಲ್ಎ . ಜೊತೆಗೆ, ಆರು ತಿಂಗಳು ಹಠ ಹಿಡಿದು ಮಗನನ್ನು ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ ಮಾಡಿದರು. ರಾಜ್ಯದಲ್ಲಿ ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ ರವಿ ಹಾಗೂ ಸದಾನಂದ ಗೌಡ ಎಲ್ಲರಿಗೂ ಅಪಮಾನ ಮಾಡಿದ್ದಾರೆ. ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು ಎಂದು ಕಿಡಿಕಾರಿದರು.