ನವದೆಹಲಿ : ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪದ್ಮಶ್ರೀ ಪುರಸ್ಕೃತ ಎಂ.ಅಂಕೇಗೌಡ ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದರು.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ “ಪುಸ್ತಕ ಮನೆ” ಸ್ಥಾಪಕ ಅಂಕೇಗೌಡರು ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದರು. ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಕುಮಾರಸ್ವಾಮಿ, ಬಳಿಕ ಅಂಕೇಗೌಡರನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಂಡು ಸತ್ಕರಿಸಿದರು.
ಈ ವೇಳೆ “ಪುಸ್ತಕ ಮನೆ” ಅಭಿವೃದ್ಧಿಗೆ ಅಗತ್ಯವಿರುವ ಕೆಲಸಗಳ ಕುರಿತು ಅಂಕೇಗೌಡರಿಂದ ಮಾಹಿತಿ ಪಡೆದ ಸಚಿವರು, ಅವರ ಸಾಧನೆ ಹಾಗೂ ಪುಸ್ತಕ ಪ್ರೀತಿಯನ್ನು ಶ್ಲಾಘಿಸಿದರು. ಅಂಕೇಗೌಡರ ಪುಸ್ತಕ ಪ್ರೇಮ ಅನನ್ಯವಾಗಿದ್ದು, ಮುಂದಿನ ತಲೆಮಾರಿಗೆ ಓದಿನ ಪರಂಪರೆಯನ್ನು ಮುಂದುವರಿಸಲು ಅವರು ತೋರಿಸುತ್ತಿರುವ ಬದ್ಧತೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಇನ್ನು ಕನ್ನಡ ಸಾಹಿತ್ಯ ಮಾತ್ರವಲ್ಲದೆ, ಜಗತ್ತಿನ ಅನೇಕ ಭಾಷೆಗಳ ಶ್ರೇಷ್ಠ ಕೃತಿಗಳೂ ಅಂಕೇಗೌಡರ ಸಂಗ್ರಹದಲ್ಲಿವೆ. ಕನ್ನಡನಾಡಿನ ಹೆಮ್ಮೆ ಆಗಿರುವ ಅವರ “ಪುಸ್ತಕ ಮನೆ”ಯನ್ನು ಉಳಿಸಿ ಮತ್ತಷ್ಟು ವಿಸ್ತರಿಸಲು ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಜನರಲ್ಲಿ ಓದುವ ಅಭ್ಯಾಸ ಬೆಳೆಸಲು ತಮ್ಮ ಬದುಕನ್ನೇ ಮೀಸಲಿಟ್ಟಿರುವ ಅಂಕೇಗೌಡರು ಕಳೆದ ಐದು ದಶಕಗಳಲ್ಲಿ ಸುಮಾರು 29 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ಓದಿನ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಪ್ರಶಂಸಿಸಿದ್ದಾರೆ.



