ರಾಮನಗರ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸ್ಕಿಜೋಫ್ರೀನಿಯಾ ಖಾಯಿಲೆಯಿಂದ ಮೃತ್ಯು ಸಂಭವ ಮತ್ತು ದೌಜನ್ಯವು ಸಮಾಜದ ಇತರೆ ಖಾಯಿಲೆಗಳುಳ್ಳ ಜನರಲ್ಲಿ ಹೋಲಿಸಿದರೆ ೨-೩ ಪಟ್ಟು ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿದೆ, ಆತ್ಮಹತ್ಯೆ ಪ್ರಕರಣವು ಸಹ ಸ್ಕಿಜೋಫ್ರೀನಿಯಾ ಖಾಯಿಲೆಯಿಂದ ಬಳಲುತ್ತಿರುವವರಲ್ಲಿ ಸುಮಾರು ೧೨ ಪಟ್ಟು ಅಧಿಕವಾಗಿ ಕಂಡುಬಂದಿದೆ ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ಖಾಯಿಲೆಯನ್ನು ಚಿತ್ತವಿಕಲತೆ, ಚಿತ್ತಚಂಚಲತೆ ಅಥವಾ ಮಾನಸಿಕ ಅಸ್ವಸ್ಥತೆ ಎಂದು ಗುರುತಿಸಲಾಗಿದೆ.
ಇಂತಹ ಸಮಸ್ಯೆಗಳುಳ್ಳ ವ್ಯಕ್ತಿಗಳನ್ನು ಗುರುತಿಸಿ ಆಪ್ತ ಸಮಾಲೋಚನೆ ಮೂಲಕ ಆತ್ಮ ಸ್ಥೈರ್ಯ ತುಂಬಿ ಚಿಕಿತ್ಸೆ ನೀಡುವ ಮೂಲಕ ಗುಣ ಪಡಿಸಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ. ಸಿ. ಮಂಜುನಾಥ್ ಅವರು ತಿಳಿಸಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ, ವಿವಿಧ ಅಭಿವೃದ್ಧಿ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾವೆಲ್ಲರೂ ಜಾಗೃತರಾಗಿ ಸ್ಕಿಜೋಫ್ರೀನಿಯಾದಿಂದ ಬಳಲುತ್ತಿರುವವರಿಗೆ ಕುಟುಂಬದ ಸಹಕಾರ ಮತ್ತು ಆರೈಕೆಯಿಂದಾಗಿ ವ್ಯಕ್ತಿಯೂ ಬೇಗ ಚೇತರಿಸಿಕೊಳ್ಳುವಂತೆ ಮಾಡುವ ಮೂಲಕ ಸ್ಕಿಜೋಫ್ರೀನಿಯಾ ಸಮಾಜದ ದಯಾಳುತನದ ಶಕ್ತಿಯ ಆಚರಣೆಯಾಗಬೇಕೆಂದು ತಿಳಿಸಿದರು. ಮನೋರೋಗ ತಜ್ಞರಾದ ಡಾ. ಆದರ್ಶ ಎ.ಎಂ ಅವರು ಮಾತನಾಡಿ, ಸ್ಕಿಜೋಫ್ರೀನಿಯಾ ರೋಗಿಗಳಲ್ಲಿ ಯಾರಿಗೂ ಕಾಣದ ವಸ್ತುಗಳು ಮತ್ತು ವ್ಯಕ್ತಿಗಳು ಖಾಯಿಲೆ ಇರುವ ವ್ಯಕ್ತಿಗಳಿಗೆ ಮಾತ್ರ ಕಾಣಿಸುವುದು. ಯಾರಿಗೂ ಕೇಳಿಸದ ಶಬ್ಧಗಳು ಮತ್ತು ಧ್ವನಿಗಳು, ಮಾತುಗಳು ಖಾಯಿಲೆ ಇರುವ ವ್ಯಕ್ತಿಗೆ ಮಾತ್ರ ಕಾಣಿಸುವುದು. ಅತಿ ಹೆಚ್ಚು ಅನಿಸುವಷ್ಟು ಅನುಮಾನ, ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಕಡಿಮೆಯಾಗುವುದು ಅಥವಾ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಅರಿವೇ ಇಲ್ಲದಿರುವ ಸ್ಥಿತಿ ಮಾನಸಿಕ ಅಸ್ವಸ್ಥತೆ ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಹಾಗೂ ಪ್ರೌಢಾವಸ್ಥೆಯ ಆರಂಭದ ಸಮಯದಲ್ಲಿ ಕಂಡು ಬರುತ್ತದೆ, ಮಕ್ಕಳಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದರು.
ರೋಗ ಲಕ್ಷಣವು ಸಾಮಾನ್ಯವಾಗಿ ವಾರಗಳ ಹಾಗೂ ತಿಂಗಳುಗಳು ಕಳೆದಂತೆ ನಿಧಾನವಾಗಿ ಹೆಚ್ಚಾಗುತ್ತದೆ. ದಿನಕಳೆದಂತೆ ಭ್ರಮೆ, ತಪ್ಪು ಗ್ರಹಿಕೆ, ಗೊಂದಲದ ಯೋಚನೆಗಳು, ತರ್ಕ ಸಮಸ್ಯೆ, ಅಸಹಜ ನಡವಳಿಕೆ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸಾರ್ವಜನಿಕರು ಇಂತಹ ವ್ಯಕ್ತಿಗಳು ಕಂಡು ಬಂದ ತಕ್ಷಣ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.

ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ. ರಾಜು ಅವರು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಿ.ಎಲ್.ಓ ಅಧಿಕಾರಿಗಳಾದ ಡಾ. ಸಿ. ಮಂಜುನಾಥ್, ಡಿ.ಟಿ.ಓ ಅಧಿಕಾರಿಗಳಾದ ಡಾ. ಕುಮಾರ್, ಡಿ.ಎಂ.ಓ ಅಧಿಕಾರಿಗಳಾದ ಡಾ. ಶಶಿಧರ್, ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಸಿಬ್ಬಂದಿಗಳು ಪದ್ಮರೇಖಾ, ರಾಘವೇಂದ್ರ, ಪವಿತ್ರ, ಆರೋಗ್ಯ ಸಿಬ್ಬಂದಿ, ಅರೆ ವೈದ್ಯಕೀಯ ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.