Wednesday, April 9, 2025
Google search engine

Homeರಾಜ್ಯಸುದ್ದಿಜಾಲವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ-2024: ಪದವೀಧರ ಮತದಾರರಿಗೆ ಮಾಹಿತಿ

ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ-2024: ಪದವೀಧರ ಮತದಾರರಿಗೆ ಮಾಹಿತಿ


ಬಳ್ಳಾರಿ: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ-2024 ನಿಗದಿಪಡಿಸಿದ್ದು, ಜೂನ್ 3 ರಂದು ಬೆಳಿಗ್ಗೆ 08 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಮತದಾನ ನಡೆಯಲಿದೆ.

ನೋಂದಾಯಿಸಿಕೊಂಡಿರುವ ಅರ್ಹ ಮತದಾರರು ಮತದಾನ ಮಾಡುವ ಕ್ರಮವನ್ನು ಸರಿಯಾಗಿ ಅರಿತುಕೊಂಡು ಮತ ಚಲಾಯಿಸಬೇಕು ಎಂದು ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಮತದಾರರ ಮತಗಟ್ಟೆಯ ಭಾಗ ಮತ್ತು ಕ್ರಮ ಸಂಖ್ಯೆ, ಹೆಸರು ಮತ್ತು ಮತದಾನ ಕೇಂದ್ರದ ಸ್ಥಳದ ಬಗ್ಗೆ ಮಾಹಿತಿ ಹೊಂದಿರುವ ಮತದಾರರ ಚೀಟಿಯನ್ನು ಒದಗಿಸಲಾಗಿದೆ.

ಮತದಾರರ ಅನುಕೂಲಕ್ಕಾಗಿ ಗೂಗಲ್ ನಕ್ಷೆಯಲ್ಲಿ ಸ್ಥಳದ ಕ್ಯೂಆರ್ ಕೋಡ್‍ಅನ್ನು ಸಹ ಒದಗಿಸಲಾಗಿದೆ. ಸ್ಮಾರ್ಟ್ ಮೊಬೈಲ್‍ನಿಂದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮತಗಟ್ಟೆಗೆ ಗೂಗಲ್ ಮಾರ್ಗನಕ್ಷೆಯನ್ನು ಅನುಸರಿಸಿ ಮತದಾನ ಕೇಂದ್ರಗಳಿಗೆ ತಲುಪಬಹುದು.

ಮತದಾರರ ಗುರುತಿಗೆ ಬಳಸುವ ದಾಖಲೆಗಳು: ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ (ಎಪಿಕ್) ಅಥವಾ ಆಧಾರ್‍ಕಾರ್ಡ್, ಚಾಲನಾ ಪರವಾನಗಿ, ಪಾನ್ ಕಾರ್ಡ್, ಭಾರತೀಯ ರಾಜ್ಯ ಮತ್ತು ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳು, ಸ್ಥಳೀಯ ಸಂಸ್ಥೆಗಳು ಅಥವಾ ಇತರ ಖಾಸಗಿ ಕೈಗಾರಿಕೆಗಳಿಂದ ಉದ್ಯೋಗಿಗಳಿಗೆ ನೀಡಲಾದ ಸೇವಾ ಗುರುತಿನ ಚೀಟಿ, ಎಂಪಿ, ಎಂಎಲ್‍ಎ, ಎಂಎಲ್ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು, ಸಂಬಂಧಪಟ್ಟ ಶಿಕ್ಷಕರ ಅಥವಾ ಪದವೀಧರರ ಕ್ಷೇತ್ರದ ಮತದಾರರು ನೇಮಕಗೊಂಡಿರುವ ಶಿಕ್ಷಣ ಸಂಸ್ಥೆಗಳು ನೀಡಿದ ಸೇವಾ ಗುರುತಿನ ಚೀಟಿ, ವಿಶ್ವವಿದ್ಯಾಲಯ ನೀಡಿದ ಪದವಿ ಮತ್ತು ಡಿಪ್ಲೋಮಾ ಪ್ರಮಾಣ ಪತ್ರದ ಮೂಲಪ್ರತಿ (ಭಾವಚಿತ್ರ ಹೊಂದಿದ್ದಲ್ಲಿ), ಮತ್ತು ಸಕ್ಷಮ ಪ್ರಾಧಿಕಾರದಿಂದ ನೀಡಿದ ದೈಹಿಕ ನ್ಯೂನತೆಯ ಪ್ರಮಾಣ ಪತ್ರದ ಮೂಲಪ್ರತಿ ತೋರಿಸಬೇಕು.

ಮತದಾರರು ತಮ್ಮ ಮತ ಚಲಾಯಿಸಲು ಸ್ವಂತ ಪೆನ್ ಅಥವಾ ಪೆನ್ಸಿಲ್ ಬಳಸುವಂತಿಲ್ಲ. ಮತದಾನ ಗುರುತಿಗಾಗಿ ಚುನಾವಣಾ ಆಯೋಗದಿಂದಲೇ ಮತಗಟ್ಟೆಯಲ್ಲಿ ಪೆನ್ ಒದಗಿಸಲಾಗುವುದು. ಹೀಗಾಗಿ ಸಹಿ ಮಾಡಲು ಪೆನ್ ಮತ್ತು ಮತಪತ್ರವನ್ನು ಗುರುತಿಸಲು ನೇರಳೆ ಬಣ್ಣದ ಸ್ಕೆಚ್ ಪೆನ್ ನೀಡಲಾಗುವುದು. ಮತಪತ್ರದ ಕೌಂಟರ್ ಫೈಲ್‍ನಲ್ಲಿ ಪ್ರತಿಯೊಬ್ಬ ಮತದಾರರು ಸಹಿಯನ್ನು ಹಾಕಬೇಕು. ನೀವು ಸಹಿಯನ್ನು ಹಾಕಲು ನಿರಾಕರಿಸಿದರೆ ನಿಮಗೆ ಮತಪತ್ರವನ್ನು ನೀಡಲಾಗುವುದಿಲ್ಲ. ಕೌಂಟರ್ ಫೈಲ್‍ನಲ್ಲಿ ನೀವು ಸಹಿ ಮಾಡಿದ ನಂತರ, ನಿಮಗೆ ಮತಪತ್ರವನ್ನು ನೀಡಲಾಗುವುದು.

ಮೂರನೇ ಮತಗಟ್ಟೆ ಅಧಿಕಾರಿಯು ಮತಪತ್ರವನ್ನು ತೆಗೆದುಕೊಂಡು ಮತಪತ್ರದ ಹಿಂಭಾಗದಲ್ಲಿ ಮೇಲಿನ ಬಲ ಮೂಲೆಯಲ್ಲಿನ ವಿಶೇಷ ಗುರುತು ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ ಅದನ್ನು ಮೊದಲು ಲಂಬವಾಗಿ ಮತ್ತು ನಂತರ ಅಡ್ಡಡ್ಡಲಾಗಿ ಎರಡು ಬಾರಿ ಮಡಚಿ ಮತದಾರರಿಗೆ ಹಿಂದಿರುಗಿಸುತ್ತಾರೆ. ಮತದಾರರು ತಮ್ಮ ಮತ ಪತ್ರವನ್ನು ವೋಟಿಂಗ್ ಕಂಪಾರ್ಟ್‍ಮೆಂಟ್ ಒಳಗೆ ಕೊಂಡೊಯ್ದು ಅಲ್ಲಿ ಸೂಕ್ತವಾಗಿ ಮತದಾನ ಮಾಡಿದ ನಂತರ ಅದನ್ನು ಮೊದಲಿನಂತೆ ಮಡಚಿ ಮತ ಪೆಟ್ಟಿಗೆಗೆ ಹಾಕಬೇಕು. ನೇರಳೆ ಸ್ಕೆಚ್ ಪೆನ್ನನ್ನು ಅಧ್ಯಕ್ಷಾಧಿಕಾರಿಗೆ ಹಿಂತಿರುಗಿಸಿದ ನಂತರ ಮತದಾರರು ಮತದಾನ ಕೇಂದ್ರದಿಂದ ಹೊರಗೆ ತೆರಳಬೇಕು. ಮತಗಟ್ಟೆಯಿಂದ ಹೊರಗೆ ಹೋದ ನಂತರ ಬಿ.ಎಲ್.ಓ. ಅವರ ಹತ್ತಿರ ಇರುವ ಪೆಟ್ಟಿಗೆಯಲ್ಲಿ ನಿಮ್ಮ ಯಾವುದೇ ವಸ್ತುವನ್ನು ಇಟ್ಟಿದ್ದಲ್ಲಿ ಅದನ್ನು ಹಿಂತೆಗೆದುಕೊಳ್ಳಬೇಕು.

ಅಂಕಿ 1 ಮತ್ತು 2, 3 ಇತ್ಯಾದಿ ಇತರ ಕೆಲವು ಅಂಕಿಗಳನ್ನು ಸಹ ಒಂದೇ ಅಭ್ಯರ್ಥಿಯ ಹೆಸರಿನ ಎದುರು ಗುರುತಿಸಿರುವುದು. ಪ್ರಾಶಸ್ತ್ಯವನ್ನು ಅಂಕಿಗಳ ಬದಲಿಗೆ ಪದಗಳಲ್ಲಿ ಸೂಚಿಸುವುದು. ಮತದಾರರನ್ನು ಗುರುತಿಸುವಂತಹ ಯಾವುದೇ ಗುರುತು ಅಥವಾ ಬರಹವಿರುವುದು. ನೇರಳೆ ಬಣ್ಣದ ಸ್ಕೆಚ್ ಪೆನ್ ಅನ್ನು ಹೊರತುಪಡಿಸಿ ಬೇರೆ ಲೇಖನಿಯನ್ನು ಬಳಸಿರುವುದು, ಇವು ಮತವನ್ನು ಅಮಾನ್ಯ ಮಾಡಲು ಕಾರಣವಾಗಲಿವೆ.

ಮತದಾನದ ಗೌಪ್ಯತೆಯನ್ನು ಕಾಯ್ದುಕೊಳ್ಳುವುದು: ಪ್ರಾಶಸ್ತ್ಯವನ್ನು ಗುರುತಿಸಿದ ನಂತರ ಮತಗಟ್ಟೆಯೊಳಗೆ ಅಥವಾ ಇನ್ಯಾವುದೇ ರೀತಿಯಲ್ಲಿ ನಿಮ್ಮ ಗುರುತು ಮಾಡಿದ ಮತ ಪತ್ರವನ್ನು ಪ್ರದರ್ಶಿಸುವ ಮೂಲಕ ಮತದಾರರು ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದರೆ ಅಥವಾ ಮತಗಟ್ಟೆ ಅಧಿಕಾರಿಯು ನಿಮಗೆ ಎಚ್ಚರಿಕೆ ನೀಡಿದ ನಂತರವೂ ನಿಗದಿತ ಮತದಾನ ವಿಧಾನವನ್ನು ಅನುಸರಿಸಲು ನಿರಾಕರಿಸಿದರೆ, ಮತ ಪತ್ರವನ್ನು ನಿಮ್ಮಿಂದ ಹಿಂಪಡೆಯಲಾಗುತ್ತದೆ ಮತ್ತು ಮತಪತ್ರವನ್ನು ಅಧ್ಯಕ್ಷಾಧಿಕಾರಿಯವರು ರದ್ದುಗೊಳಿಸುತ್ತಾರೆ.

ಮತ ಪತ್ರವನ್ನು ಹೊರತುಪಡಿಸಿ ಮತ ಪೆಟ್ಟಿಗೆಗೆ ಇನ್ನೇನ್ನಾದರೂ ಹಾಕುವುದು ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 136ರ ಅಡಿ ಚುನಾವಣಾ ಅಪರಾಧವಾಗಿರುತ್ತದೆ ಎಂದು ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ

RELATED ARTICLES
- Advertisment -
Google search engine

Most Popular