ರಾಮನಗರ: ಮಹಾತ್ಮ ಗಾಂಧೀಜಿ ಅವರು ಎಲ್ಲರಂತೆ ಸಾಮಾನ್ಯ ವ್ಯಕ್ತಿಯಾಗಿದ್ದು, ದೇಶದ ರಾಷ್ಟ್ರಪಿತ, ಮಹಾತ್ಮರಾಗಿ ರೂಪಗೊಂಡರು. ಅವರು ಒಬ್ಬ ವ್ಯಕ್ತಿ ಅಲ್ಲ ಅದು ಒಂದು ಶಕ್ತಿ, ಒಂದು ಸಿದ್ದಾಂತ ಹಾಗೂ ಆದರ್ಶ ಎಂಬ ಮಟ್ಟಕ್ಕೆ ಅವರು ಕೊಂಡೊಯ್ದರು ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳು, ಚಿಂತನೆಗಳು ಸಮಾಜಕ್ಕೆ ದಾರಿ ಎಂದು ತೋರಿಸಿದರು. ಆ ದಾರಿಯಲ್ಲಿ ನಾವೆಲ್ಲರೂ ನಡೆಯೋಣ. ಉತ್ತಮ ಸಮಾಜ ನಿರ್ಮಾಣ ಮಾಡಲು ಸರ್ವರಿಗೂ ಶಿಕ್ಷಣ, ಉದ್ಯೋಗ ಹಾಗೂ ಎಲ್ಲರೂ ಕೂಡ ಸಮಾನತೆಯಿಂದ ಬಾಳಬೇಕು ಹಾಗೂ ಅವರ ಆದರ್ಶಗಳು ಮತ್ತು ಚಿಂತನೆಗಳನ್ನು ಪಾಲಿಸೋಣ ಎಂದರು.
ಚನ್ನಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಬಿ. ಉಮೇಶ್ ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತು ಉಪನ್ಯಾಸ ನೀಡಿ, ಮೋಹನದಾಸ್ ಕರಮಚಂದ್ ಗಾಂಧಿಯವರು ಅಕ್ಟೋಬರ್ ೨, ೧೮೬೯ ರಂದು ಗುಜರಾತಿನ ಪೋರಬಂದರ್ನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಕರಮಚಂದ ಗಾಂಧಿ ಮತ್ತು ಅವರ ತಾಯಿಯ ಹೆಸರು ಪುತಲಿಬಾಯಿ. ಪ್ರತಿವರ್ಷ ಅ. ೨ ರಂದು ದೇಶದ ಜನತೆ ಇಬ್ಬರು ಮಹಾನ್ ವ್ಯಕ್ತಿಗಳ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಒಬ್ಬರು ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ಧೂರ್ ಶಾಸ್ತ್ರಿ ಈ ದೇಶ ಕಂಡ ಅಪ್ರತಿಮ ನಾಯಕ. ಸಜ್ಜನ ನೇತಾರರು ಎಂದರು.
ಲಾಲ್ ಬಹದ್ಧೂರ್ ಶಾಸ್ತ್ರಿ ಅವರು ಒಂದೂವರೆ ವರ್ಷದಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡು, ತಾಯಿಯ ಮಡಿಲಲ್ಲೇ ಬೆಳೆದರು. ವಿದ್ಯಾಭ್ಯಾಸವನ್ನು ವಾರಣಾಸಿಯಲ್ಲಿ ಮಾಡಿದರು. ೧೬ ವರ್ಷದಲ್ಲಿದ್ದಾಗ ಗಾಂಧಿ ಅವರ ಕರೆಗೆ ಓಗಟ್ಟು ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡರು. ನಂತರ ವಾರಣಾಸಿಯ ಕಾಶಿ ವಿದ್ಯಾಪೀಠವನ್ನು ಸೇರಿದರು ಎಂದರು.
ಕಾರ್ಯಕ್ರಮದಲ್ಲಿ ರಮಣೀ ಮತ್ತು ತಂಡದವರು ಭಜನೆ ಪ್ರಸ್ತುತಪಡಿಸಿದರು. ಬ್ಯಾಡರಹಳ್ಳಿ ಶಿವಕುಮಾರ್ ಅವರು ನಿರೂಪಿಸಿದರು. ರಾಮನಗರ ಉಪವಿಭಾಗಾಧಿಕಾರಿ ಬಿನೋಯ್, ರಾಮನಗರ ತಾಲ್ಲೂಕು ತಹಶೀಲ್ದಾರರಾದ ತೇಜಸ್ವಿನಿ, ಡಿಡಿಪಿಐ ಬಸವರಾಜೇ ಗೌಡ, ಡಿಡಿಪಿಯು ಗೋವಿಂದ ಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.