ಚಾಮರಾಜನಗರ: ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಚಿಂತಕರು, ಜ್ಞಾನಿಗಳು ,ಸಾಹಿತಿಗಳು ,ಕವಿಗಳು ಸಾಹಿತ್ಯ ರಚನೆಯ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು, ಮತ್ತು ಮೂರು ರಾಷ್ಟ್ರಕವಿ ಪ್ರಶಸ್ತಿಗಳು ಸಂದಿವೆ ಎಂದು ಕವಿ ಡಾ. ಬಿ ಆರ್ ಕೃಷ್ಣ ಕುಮಾರ್ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಯುತ್ತಿರುವ 50 ದಿನಗಳ ನಿರಂತರ ಕನ್ನಡ ರಾಜ್ಯೋತ್ಸವದ 15ನೇ ದಿನದ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡುತ್ತಾ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ,ಮಾಸ್ತಿ ವೆಂಕಟೇಶ ಅಯ್ಯಂಗಾರ್ ,ಗೋಕಾಕ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್ , ಚಂದ್ರಶೇಖರ ಕಂಬಾರ ಕೃತಿಗಳ ಬಗ್ಗೆ ಮಾತನಾಡುತ್ತಾ ಸಾಹಿತ್ಯ ಕೃತಿಗಳು ಕನ್ನಡಿಗರ ಗೌರವದ ಕೃತಿಗಳಾಗಿವೆ. ಕನ್ನಡ ಸಾಹಿತ್ಯ ಓದುವ ಮೂಲಕ ಪುಸ್ತಕಗಳನ್ನು ಅಧ್ಯಯನ ಮಾಡಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ ಎಂದರು.
ಉದ್ಘಾಟನೆಯನ್ನು ಸಂಸ್ಕೃತಿ ಚಿಂತಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ನೆರವೇರಿಸಿ ಮಾತನಾಡುತ್ತಾ ಕನ್ನಡದ ಸಾಹಿತ್ಯ ಮೇರು ಸಾಹಿತ್ಯ. ವಿಶ್ವದಲ್ಲೇ ಪ್ರಸಿದ್ಧಿಯನ್ನು ಪಡೆದಿರುವ ಸಾವಿರಾರು ಕೃತಿಗಳು ಇವೆ. ವಿಶ್ವದ ಎಲ್ಲೆಡೆ ಕನ್ನಡಿಗರು ವಾಸಿಸುತ್ತಿದ್ದು ಕನ್ನಡದ ಸಂಸ್ಕೃತಿ ಪರಂಪರೆ ಹಾಗೂ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಎಲ್ಲೆಡೆ ಕಾಣಬಹುದಾಗಿದೆ . ಸ್ವಾಭಿಮಾನ ಅಭಿಮಾನ ಜಾಗೃತಿ ಮೂಡುತ್ತಿದೆ. ಯುವ ಪೀಳಿಗೆಗೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಕಾರ್ಯ ಆಗಬೇಕು. ಸಂಘ-ಸಂಸ್ಥೆಗಳು ರಿಯಾಯಿತಿ ತರದಲ್ಲಿ ಪುಸ್ತಕಗಳನ್ನು ನೀಡಿದಾಗ ಕೊಂಡು ಓದುವ ಪ್ರವೃತ್ತಿ ಹೆಚ್ಚಾಗುತ್ತದೆ. ಪ್ರತಿ ಮನೆಯಲ್ಲೂ ನೂರಾರು ಕನ್ನಡ ಪುಸ್ತಕಗಳನ್ನು ಇಟ್ಟುಕೊಂಡು ಭವಿಷ್ಯದ ಮಕ್ಕಳಿಗೆ ಪುಸ್ತಕವನ್ನು ನೀಡುವ ಜೊತೆಗೆ ಕನ್ನಡದ ಸಾಹಿತ್ಯದ ಬೆಳವಣಿಗೆಗೆ ಎಲ್ಲರೂ ಕಾರಣ ಆಗಬೇಕಾಗಿದೆ. ನಮ್ಮೊಡನೆ ನೂರಾರು ಕವಿಗಳು, ಸಾಹಿತಿಗಳು, ಜ್ಞಾನಿಗಳು ಇದ್ದಾರೆ. ಅವರೊಂದಿಗೆ ಸಂವಾದ ,ಚರ್ಚೆ ಹಾಗೂ ಮಾತುಕತೆಯನ್ನು ಆಡುವ ಮೂಲಕ ಅಭಿಮಾನವನ್ನು ಬೆಳೆಸಬೇಕಿದೆ ಎಂದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷರಾದ ಶ್ರೀನಿವಾಸ್ ಗೌಡ ಮಾತನಾಡಿ ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಸಂಭ್ರಮದ ಅಂಗವಾಗಿ 50 ದಿನಗಳ ನಿರಂತರ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರತಿನಿತ್ಯ 630 ರಿಂದ 7:30ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಉಪನ್ಯಾಸ ,ಚರ್ಚೆ ,ಗಾಯನ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ .ಕನ್ನಡದ ಅಭಿಮಾನಿಗಳು, ಸಾಹಿತ್ಯ ಪರಿಷತ್ತಿನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕು. ಕನ್ನಡವನ್ನು ಎಲ್ಲರೂ ಸೇರಿ ಕಟ್ಟೋಣ ,ಕನ್ನಡ ಉಳಿವಿಗಾಗಿ ಶ್ರಮಿಸೋಣ ಎಂದರು.
ಹಿರಿಯ ಕನ್ನಡ ಚಳುವಳಿಗಾರ ಶಾ ಮುರಳಿ,ರಾಜಗೋಪಾಲ್, ತಮಿಳು ಸಂಘದ ಅಧ್ಯಕ್ಷ ಜಗದೀಶ್,ಪನ್ಯದಹುಂಡಿ ರಾಜು ,ಶಿವಲಿಂಗ ಮೂರ್ತಿ, ಲಿಂಗರಾಜು, ಪದ್ಮ ಪುರುಷೋತ್ತಮ್, ದ್ವಾರಕೀಶ್, ಶಿವಮೂರ್ತಿ, ಶಿವಣ್ಣ, ಮುಂತಾದವರು ಉಪಸ್ಥಿತರಿದ್ದರು.