Tuesday, January 20, 2026
Google search engine

Homeರಾಜಕೀಯಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆಯಂತೆ, ಬಿಜೆಪಿಯವರಿಗೆ ನನ್ನ ಹೆಸರೇ ಆಸರೆ : ಪ್ರಿಯಾಂಕ್‌ ಖರ್ಗೆ

ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆಯಂತೆ, ಬಿಜೆಪಿಯವರಿಗೆ ನನ್ನ ಹೆಸರೇ ಆಸರೆ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು : ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಎನ್ನುವಂತೆ, ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ಪ್ರಿಯಾಂಕ್ ಖರ್ಗೆಯ ಹೆಸರೇ ಆಸರೆ! ಅಪ್ರಸ್ತುತಗೊಳ್ಳುತ್ತಿದ್ದೇವೆ ಎನಿಸಿದಾಗ ನನ್ನ ಹೆಸರು ಹಿಡಿದುಕೊಂಡು ಚಾಲ್ತಿಗೆ ಬರುವ ಪ್ರಯತ್ನ ನಡೆಸಿದ್ದಾರೆ ಬಿಜೆಪಿಯ ಮಾಜಿ ಶಾಸಕರೊಬ್ಬರು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಪ್ರಜ್ಞೆ ಇಲ್ಲದವರ ತರ್ಕವಿಲ್ಲದ ಮಾತುಗಳಿಗೆ ಉತ್ತರ ನೀಡುವುದು ಸಮಯ ವ್ಯರ್ಥವೇ ಸರಿ, ಆದರೆ ಸಚಿವನಾಗಿ ಕುತರ್ಕಗಳಿಗೂ ಉತ್ತರಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಕಚೇರಿಯ ಮೂಲೆಯಲ್ಲಿ ಗುಜರಿಯ ತೂಕಕ್ಕೆ ಹಾಕಲು ಇಟ್ಟಿದ್ದ ಯಾವುದೋ ಪೇಪರ್ ಬಂಡಲ್ ನ್ನು ಮುಂದೆ ಇಟ್ಟುಕೊಂಡು ತರ್ಕವಿಲ್ಲದ, ಹುರುಳಿಲ್ಲದ, ಮತ್ತು ಸತ್ಯಾಂಶವಿಲ್ಲದ ಆರೋಪಗಳನ್ನು ಮಾಡಿದ್ದಾರೆ, ಗುಡ್ಡ ಅಗೆಯುವವರಿಗೆ ಇಲಿಯನ್ನಾದರೂ ಹಿಡಿಯುವ ಗುರಿ ಇರಬೇಕು, ಇವರಿಗೆ ಜಿರಳೆ ಹಿಡಿಯಲೂ ಸಾಧ್ಯವಾಗಲಿಲ್ಲ.

15ನೇ ಹಣಕಾಸು ಆಯೋಗದ ಅನುದಾನದಲ್ಲಿ 90%ರಷ್ಟು ಜನಸಂಖ್ಯೆಯ ಆಧಾರದಲ್ಲಿ ಮತ್ತು 10%ರಷ್ಟು ಭೌಗೋಳಿಕ ಆಧಾರದಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸುತ್ತೋಲೆ ಹಾಗೂ ಮಾರ್ಗಸೂಚಿಗಳ ಅನ್ವಯ ಬಿಡುಗಡೆ ಮಾಡಲಾಗುತ್ತದೆ, ಒಟ್ಟು ಅನುದಾನದಲ್ಲಿ 60% ನಿರ್ಬಂಧಿತ, 40% ಅನಿರ್ಬಂಧಿತ ಅನುದಾನವಾಗಿ ಬಿಡುಗಡೆ ಮಾಡಲಾಗುತ್ತದೆ.

ಈ ಅನುದಾನವನ್ನು ಗ್ರಾಮ ಪಂಚಾಯತಿಗಳು ಮಾರ್ಗಸೂಚಿ ಅನ್ವಯ ಗ್ರಾಮ ಸಭೆ ನಡೆಸಿ, ಕ್ರಿಯಾ ಯೋಜನೆ ತಯಾರಿಸಿಕೊಂಡು, ಗ್ರಾಮ ಪಂಚಾಯತಿಗಳ ಹಂತದಲ್ಲೇ ಕಾಮಗಾರಿ ಮಾಡಲಾಗುತ್ತದೆ, ಕ್ರಿಯಾಯೋಜನೆ ಮತ್ತು ಅನುಷ್ಠಾನದ ಮಾಹಿತಿಯನ್ನು ಇ- ಗ್ರಾಮ್ ಸ್ವರಾಜ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆಯೇ ಹೊರತು ಸರ್ಕಾರದಿಂದ ಅನುಮೋದನೆ ಪಡೆಯುವ ಅವಶ್ಯಕತೆ ಇರುವುದಿಲ್ಲ, ಸಂವಿಧಾನದ 73, 74 ತಿದ್ದುಪಡಿಯ ಮೂಲ ಆಶಯದಂತೆ ಸ್ಥಳೀಯವಾಗಿಯೇ ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ. ಈ ಮೂಲಭೂತ ಪ್ರಜ್ಞೆ ಆರೋಪ ಮಾಡುವವರಿಗೆ ಇರಬೇಕಾಗಿದ್ದು ಅತ್ಯವಶ್ಯಕ ಎಂದಿದ್ದಾರೆ.

ಮುಂದುವರೆದು, ಈ ಅನುದಾನದ ಬಿಡುಗಡೆ ಮತ್ತು ಹಂಚಿಕೆಯಲ್ಲಿ ನನ್ನ ಪಾತ್ರ ಎಲ್ಲಿದೆ ಮತ್ತು ಹೇಗಿದೆ ಎನ್ನುವುದನ್ನು ದಾಖಲೆ ಸಮೇತ ನಿರೂಪಿಸಲು ಸಾಧ್ಯವಾಗದ ಮಾಜಿ ಶಾಸಕರು ಕೇವಲ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಅವರ ಗಾಳಿಯ ಗುಂಡು ಕೇವಲ ಶಬ್ದಕ್ಕಾಗಿ ಮಾತ್ರ ಎಂದು ತಿರುಗೇಟು ನೀಡಿದ್ದಾರೆ.

ಈ ವೇಳೆ 15ನೇ ಹಣಕಾಸು ಆಯೋಗದ ಅನುದಾನದ ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಮಾಜಿ ಶಾಸಕರು ಹೇಳುವ ಮಾದರಿಯಲ್ಲಿ ಯಾವುದೇ ಆಕ್ಷೇಪಣೆಗಳು ಬಂದಿಲ್ಲ, ಹೀಗಿರುವಾಗ ಇವರ ಆರೋಪಕ್ಕೆ ಸಾಕ್ಷಿಗಳೇನು? 2020-21ರಿಂದ 2022-23ರವರೆಗೆ, ಬಿಜೆಪಿ ಆಡಳಿತದ ಅವಧಿಯಲ್ಲಿ 65,325.36 ಲಕ್ಷ ರೂಪಾಯಿಗಳನ್ನು ಆಕ್ಷೇಪಣೆಯಲ್ಲಿರಿಸಲಾಗಿತ್ತು, ಇದರಲ್ಲಿ 4,586.63 ಲಕ್ಷ ರೂಪಾಯಿಗಳ ವಸೂಲಾತಿಗೆ ಸೂಚಿಸಲಾಗಿತ್ತು, ಇದಕ್ಕೆ ಉತ್ತರ ಹೇಳುವವರು ಯಾರು? ಎಂದು ಪಶ್ನಿಸಿದ್ದಾರೆ.

RELATED ARTICLES
- Advertisment -
Google search engine

Most Popular