ಬೆಂಗಳೂರು: ಅರಣ್ಯ ಹಕ್ಕು ಕಾಯಿದೆ -2006 ಅಡಿಯಲ್ಲಿ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನಾಂಗದವರು ತಮ್ಮ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸಲು ಹಕ್ಕು ಹೊಂದಿದ್ದಾರೆ. ಆದರೆ ನೆರೆರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ದನಕರುಗಳನ್ನು ತಂದು ರಾಜ್ಯದ ಕಾಡಿನಲ್ಲಿ ಮೇಯಿಸುವುದಕ್ಕೆ ಮಾತ್ರ ಕಡಿವಾಣ ಹಾಕಲಾಗುವುದು ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಅವರು, ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಅಡಿಯಲ್ಲಿ ಮೀಸಲು ಅರಣ್ಯಗಳು, ವನ್ಯಜೀವಿಧಾಮಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಾಕುಪ್ರಾಣಿಗಳನ್ನು ಬಿಡುವುದು ಕಾನೂನಿಗೆ ವಿರುದ್ಧವೆಂದು ತಿಳಿಸಿದ್ದಾರೆ. ಆದರೆ ಕೆಲ ಅರಣ್ಯ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ಈ ರೂಢಿ ಇದ್ದು, ಕಾಡಿನಂಚಿನ ಜನರಿಗೆ ಜಾಗೃತಿ ಮೂಡಿಸುವ ಜೊತೆಗೆ, ಹಸಿ ಮೇವು ಬೆಳೆಸಲು ಪ್ರೋತ್ಸಾಹಿಸುವ ಮೂಲಕ ದನ ಮೇಯಿಸುವ ಕ್ರಮವನ್ನು ಹಂತ ಹಂತವಾಗಿ ನಿಲ್ಲಿಸಲು ಯೋಜನೆ ರೂಪಿಸಲಾಗಿದೆ.
ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಪಶುಸಂಗೋಪನಾ ಇಲಾಖೆಯ ವರದಿಯ ಪ್ರಕಾರ ಸುಮಾರು 33 ಸಾವಿರ ದನಕರುಗಳಿವೆ. ಇಷ್ಟು ಪ್ರಮಾಣದ ದನಕರುಗಳು ಕಾಡಿನಲ್ಲಿ ಮೇಯುವುದರಿಂದ ವನ್ಯಜೀವಿಗಳಿಗೆ ಆಹಾರ ಹಾಗೂ ನೀರಿನ ಕೊರತೆ ಉಂಟಾಗುತ್ತಿದೆ. ಜೊತೆಗೆ ಬಾವು, ಕಾಲುಬಾಯಿ ರೋಗ, ಚರ್ಮಗಂಟು ಮುಂತಾದ ಕಾಯಿಲೆಗಳ ಹರಡುವ ಅಪಾಯವೂ ಹೆಚ್ಚುತ್ತಿದೆ.
ಚಾಮರಾಜನಗರದಲ್ಲಿ 10-15 ರೈತರಿಗೆ ಹೆಚ್ಚಿನ ಹಾಲು ನೀಡುವ ಹೈಬ್ರೀಡ್ ಹಸುಗಳನ್ನು ನೀಡಲಾಗಿದೆ. ಈ ಮಾದರಿಯನ್ನು ವಿಸ್ತರಿಸುವ ಮೂಲಕ ಕಾಡಿನಲ್ಲಿ ದನಗಳನ್ನು ಬಿಡುವ ವ್ಯವಸ್ಥೆಯನ್ನು ತಾತ್ವಿಕವಾಗಿ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ತೀರ್ಪಿನನಂತರ ರಾಜ್ಯದ ಕಾಡುಗಳಲ್ಲಿ ಜಾನುವಾರು ಮೇಯಿಸುವು ಹೆಚ್ಚಳವಾಗಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.