ಲಖನೌ: ಲೋಕಸಭೆ ಚುನಾವಣೆಯ ಉಳಿದ ಹಂತಗಳಲ್ಲಿ ಬಿಜೆಪಿಯ ಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶನಿವಾರ ಹೇಳಿದ್ದಾರೆ. ೧೩ ರಾಜ್ಯಗಳ ೮೮ ಸ್ಥಾನಗಳಲ್ಲಿ ಎರಡನೇ ಸುತ್ತಿನ ಮತದಾನ ನಡೆದ ಒಂದು ದಿನದ ನಂತರ ಈ ಹೇಳಿಕೆಯನ್ನು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ನೀಡಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿದ ಬಿಜೆಪಿ ಏಜೆಂಟ್ ಒಬ್ಬರು, ಮತದಾನ ಕಡಿಮೆಯಾಗಿರಲು ಜನರಲ್ಲಿ ಜಾಗರೂಕತೆ ಕಡಿಮೆ ಆಗಿರುವುದು ಕಾರಣವಾಗಿರಬಹುದು ಅಥವಾ ಜನರಲ್ಲಿ ಸರ್ಕಾರದ ವಿರುದ್ಧ ಇರುವ ಆಕ್ರೋಶವು ಆಗಿರಬಹುದು. ಬೆಲೆ ಏರಿಕೆ, ನಿರುದ್ಯೋಗ ಕಾರಣವಾಗಿರಬಹುದು. ಇದನ್ನು ಬಿಟ್ಟು ಬೇರೆ ಕಾರಣವೂ ಕೂಡಾ ಆಗಿರಬಹುದು ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್ ಅವರು, ಮೊದಲ ಎರಡು ಹಂತಗಳಲ್ಲಿ ಬಿಜೆಪಿ ಹೆಚ್ಚಿನ ಮತವನ್ನು ಪಡೆದಿಲ್ಲ, ಉಳಿದ ಹಂತಗಳಲ್ಲಿ ಬಿಜೆಪಿಗೆ ಬೂತ್ ಏಜೆಂಟ್ ಕೂಡಾ ಇರಲಾರರು ಎಂದು ಹೇಳಿದರು.
ಮೊದಲ ಎರಡು ಹಂತದ ಮತದಾನದ ನಂತರ ಮುಂದಿನ ಹಂತಗಳಲ್ಲಿ ಬಿಜೆಪಿಯ ಸ್ಥಿತಿ ಇನ್ನಷ್ಟು ಹದಗೆಡಲಿದೆ. ಬಿಜೆಪಿ ನಿರ್ಗಮನವನ್ನು ಜನರು ಖಚಿತಪಡಿಸುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು. ಬಿಜೆಪಿ ನಾಯಕರ ೧೦ ವರ್ಷಗಳ ಸುಳ್ಳಿನ ನಂತರ, ಬಿಜೆಪಿಯ ಬೂತ್ ಏಜೆಂಟ್ ಪಕ್ಷದ ಕಳಪೆ ಸ್ಥಿತಿಯ ಬಗ್ಗೆ ಸತ್ಯವನ್ನು ಮಾತನಾಡುತ್ತಿದ್ದಾರೆ. ಜನರು ಬಿಜೆಪಿಯ ಪರವಾಗಿ ಮತ ಹಾಕದಿರಲು ಹಣದುಬ್ಬರ ಮತ್ತು ನಿರುದ್ಯೋಗ ಕಾರಣ ಎಂದು ಹೇಳಿದರು.