ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ, ಏಪ್ರಿಲ್ ೨೪ರ ಸಂಜೆ ೬ರಿಂದ ಏಪ್ರಿಲ್ ೨೬ರವರ ಮಧ್ಯರಾತ್ರಿಯವರೆಗೆ ಸಿಆರ್ಪಿಸಿ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಹಿನ್ನೆಲೆ, ಕೆಲವೊಂದು ನಿರ್ಬಂಧದ ಕ್ರಮಗಳನ್ನುಜಾರಿಗೊಳಿಸಲಾಗಿದೆ.
ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಬೆಂಗಳೂರಿನಲ್ಲಿ ಏಪ್ರಿಲ್ ೨೬ ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹಲವು ನಿರ್ಬಂಧ ಆದೇಶಗಳನ್ನು ಹೊರಡಿಸಲಾಗಿದೆ. ಅದಲ್ಲದೇ ಚುನಾವಣಾ ದಿನ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಮುಕ್ತ, ನಿರ್ಭಿತ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.
೧೪೪ ಸೆಕ್ಷನ್ ಜಾರಿಯಾದ ಹಿನ್ನೆಲೆ, ಐದು ಜನರಿಗಿಂತ ಹೆಚ್ಚು ಜನ ಗುಂಪುಗೂಡಬಾರದು, ರ?ಯಾಲಿಗಳು, ಸಾರ್ವಜನಿಕ ಸಭೆಗಳನ್ನು ನಡೆಸುವಂತೆ ಇಲ್ಲ. ಮಾರಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಹೊಂದಿರಬಾರದು. ಪ್ರತಿಮೆಗಳನ್ನು ಪ್ರದರ್ಶಿಸುವುದು ಮತ್ತು ಬೆಂಕಿ ಹಚ್ಚಿ ಸುಟ್ಟು ಹಾಕುವುದನ್ನು ಮಾಡಬಾರದು. ಪ್ರಚೋದನಕಾರಿ ಭಾಷಣ ಮಾಡಬಾರದು. ಸಾರ್ವಜನಿಕವಾಗಿ ರಾಜಕೀಯ ಘೋಷಣೆ ಕೂಗಬಾರದು.
ಮತದಾನ ಕೇಂದ್ರದ ೧೦೦ ಮೀಟರ್ ವ್ಯಾಪ್ತಿಯಲ್ಲಿ, ಪ್ರಚಾರ ಮಾಡಲು ಮತ್ತು ಪೋಸ್ಟರ್ಗಳು ಮತ್ತು ಬ್ಯಾನರ್ಗಳನ್ನು ಬಳಸಲು ಅನುಮತಿಯಿಲ್ಲ. ಮತದಾನ ಕೇಂದ್ರದ ೧೦೦ ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ಗಳು, ಕಾರ್ಡ್ಲೆಸ್ ಫೋನ್ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನ ಕೊಂಡೊಯ್ಯುವಂತೆ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಒ) ಯ ಅನುಮತಿಯೊಂದಿಗೆ ಅಧಿಕಾರಿಗಳು ಅಥವಾ ಸಿಬ್ಬಂದಿಗೆ ವಿನಾಯಿತಿ ಸಿಗಲಿದೆ.
ಮತದಾನ ನಡೆಯುವ ಏಪ್ರಿಲ್ ೨೬ರ ಮಧ್ಯರಾತ್ರಿ ೧೨ ಗಂಟೆಯಿಂದ ಏಪ್ರಿಲ್ ೨೭ರ ಮಧ್ಯರಾತ್ರಿವರೆಗೆ ಹಾಗೂ ಜೂನ್ ೩ರ ಮಧ್ಯರಾತ್ರಿಯಿಂದ ಜೂನ್ ೪ರ ಮಧ್ಯರಾತ್ರಿವರೆಗೆ ಮತಗಳ ಎಣಿಕೆಯ ಕಾರಣದಿಂದಾಗಿ, ನಗರದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಆದೇಶ ಹೊರಡಿಸಲಾಗಿದೆ.
ಈ ವೇಳೆ ಅಂಗಡಿಗಳು, ಬಾರ್ಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಹೋಟೆಲುಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳಿಗೆ ಆಹಾರ ಮತ್ತು ಆಲ್ಕೊಹಾಲ್ ಮುಕ್ತ ಪಾನೀಯಗಳನ್ನು ಪೂರೈಸಲು ಮಾತ್ರ ಅನುಮತಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.