Friday, April 11, 2025
Google search engine

Homeರಾಜ್ಯಸುದ್ದಿಜಾಲಮದ್ದೂರು:ಬಿಸಿಲ ಬೇಗೆಗೆ ಬತ್ತಿದ ಶಿಂಷಾ ನದಿ ಒಡಲು;ಕೊಕ್ಕರೆಗಳಿಗೆ ನೀರು–ಆಹಾರ ಕೊರತೆ

ಮದ್ದೂರು:ಬಿಸಿಲ ಬೇಗೆಗೆ ಬತ್ತಿದ ಶಿಂಷಾ ನದಿ ಒಡಲು;ಕೊಕ್ಕರೆಗಳಿಗೆ ನೀರು–ಆಹಾರ ಕೊರತೆ

ಮದ್ದೂರು: ಮದ್ದೂರು ತಾಲ್ಲೂಕಿನ ಶಿಂಷಾ ನದಿಯು ಬರಗಾಲದಿಂದ ಬರಿದಾಗಿದ್ದು, ಸಮೀಪದ ಪ್ರಸಿದ್ಧ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದ ಕೊಕ್ಕರೆಗಳು ನದಿ ಬತ್ತಿ ಹೋಗಿರುವುದರಿಂದ ನೀರು ಮತ್ತು ಆಹಾರವಿಲ್ಲದೆ ಪರಿತಪಿಸುತ್ತಿವೆ.

ಮದ್ದೂರು ಸಮೀಪದ ಶಿಂಷಾ ನದಿ ದಂಡೆಯ ಮೇಲಿರುವ ಪ್ರಸಿದ್ದ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ… ಶಿಂಷಾ ನದಿ ಪಕ್ಕದಲ್ಲಿದ್ದ ಕಾರಣಕ್ಕೆ ಇಲ್ಲಿನ ಪಕ್ಷಿಧಾಮದಲ್ಲಿ ವಾಸವಿದ್ದ ಹೆಚ್ಚಿನ ಸಂಖ್ಯೆಯ ಹೆರ್ಜಾಲೆ ಪಕ್ಷಿಗಳು .ನದಿ ಬತ್ತಿ ಹೋಗಿರುವುದರಿಂದ ನೀರು ಮತ್ತು ಆಹಾರವಿಲ್ಲದೆ ಕೊಕ್ಕರೆಗಳ ಪರದಾಟ…ಆಹಾರವಿಲ್ಲದೆ ಮರದಿಂದ ನಿತ್ರಾಣಗೊಂಡು ಕುಸಿದು ಬೀಳ್ತೀವೆ ಪಕ್ಷಿಗಳು…

ನದಿ ತೀರದ ಹಸಿರು ಪರಿಸರ, ಮರ– ಗಿಡಗಳ ಸಾಲು, ಸಮೀಪದ ಕೆರೆ, ಕಟ್ಟೆಗಳಲ್ಲಿ ದೊರೆಯುತ್ತಿದ್ದ ಮೀನುಗಳು ಕೊಕ್ಕರೆಗಳಿಗೆ ಪ್ರಾಕೃತಿಕವಾದ ಆವಾಸಸ್ಥಾನ ನಿರ್ಮಿಸಿತ್ತು. ಅವುಗಳ ಸಂತಾನೋತ್ಪತ್ತಿಗೂ ಹೇಳಿ ಮಾಡಿಸಿದಂತಿತ್ತು. ಆದರೆ ಈಗ ವಾಸಕ್ಕೆ ತೊಂದರೆಯಾಗಿದೆ. ಪ್ರತಿ ವರ್ಷ ಒಂದು ಸಾವಿರಕ್ಕೂ ಹೆಚ್ಚು ಪೆಲಿಕಾನ್‌ (ಹೆಜ್ಜಾರ್ಲೆ) ಹಾಗೂ 2 ಸಾವಿರಕ್ಕೂ ಹೆಚ್ಚು ಪೇಂಟೆಡ್‌ ಸ್ಟಾರ್ಕ್‌ (ಬಣ್ಣದ ಕೊಕ್ಕರೆ) ಭೇಟಿ ನೀಡುತ್ತವೆ.

ಗ್ರಾಮದ ಸುತ್ತಮುತ್ತಲಿನ ತೈಲೂರು ಕೆರೆ, ಮದ್ದೂರುಕೆರೆ, ಸೂಳೆಕೆರೆ, ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ಯಾರೇಜ್‌ ಹಾಗೂ ಮಾದರಹಳ್ಳಿ ಕೆರೆ ಬತ್ತಿದೆ. ಕೆರೆಯಲ್ಲಿ ಮೀನುಗಳ ಸಾಕಣೆಯೂ ನಡೆಯದಿರುವುದರಿಂದ, ಕೊಕ್ಕರೆಗಳ ಪ್ರಮುಖ ಆಹಾರವೂ ಇಲ್ಲವಾಗಿದೆ.

ಡಿಸೆಂಬರ್‌ನಲ್ಲಿ ಬಂದು ಜೂನ್‌ವರೆಗೂ ಇಲ್ಲಿಯೇ ಬೀಡು ಬಿಡುತ್ತಿದ್ದ ಹೆಜ್ಜಾರ್ಲೆಗಳು ಈಗ ನಿರ್ಗಮಿಸಿವೆ. ಸದ್ಯ ಪಕ್ಷಿಧಾಮದಲ್ಲಿ ಸಾವಿರಾರು ಬಣ್ಣದ ಕೊಕ್ಕರೆಗಳು ಸಂಕಷ್ಟದಲ್ಲೇ ದಿನ ದೂಡುತ್ತಿವೆ. ಮರಿಗಳು ನೀರಿನ ಕೊರತೆಯಿಂದ ಮರದ ಮೇಲಿಂದ ಬೀಳುತ್ತಿವೆ. ನದಿಯ ಮರಳು ತೆಗೆಸಿ ನೀರಿನ ಬುಗ್ಗೆಗಾಗಿ ಅರಣ್ಯ ಇಲಾಖೆ ನಡೆಸಿದ ಹುಡುಕಾಟವೂ ವಿಫಲವಾಗಿದೆ.

‘ಕೊಕ್ಕರೆಗಳ ಅನುಕೂಲಕ್ಕಾಗಿ ವನದಾಸಿ ಕಟ್ಟೆ ನಿರ್ಮಿಸಲಾಗಿತ್ತು. ಈಗ ಅಲ್ಲಿಯೂ ನೀರಿಲ್ಲ. ಸಮೀಪದ ಸರ್ಕಾರಿ ಶಾಲೆಯ ಕೊಳವೆ ಬಾವಿಯಿಂದ ನೀರು ತುಂಬಿಸಲು ಯೋಜಿಸಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಬರಗಾಲ ಬಂದಾಗಲೆಲ್ಲಾ ಇದೇ ಪರಿಸ್ಥಿತಿ ಇರುತ್ತದೆ. 1998ರ ಬರ ಪರಿಸ್ಥಿತಿಯ ನಂತರ, ಇಲ್ಲಿಗೆ ಬರುತ್ತಿದ್ದ ಕೊಕ್ಕರೆಗಳ ಸಂಖ್ಯೆ ಕ್ಷೀಣಿಸಿತ್ತು. ಇದೇ ಪರಿಸ್ಥಿತಿ ಮುಂದುವರಿದರೆ ಕೊಕ್ಕರೆಗಳೇ ಬಾರದ ಪರಿಸ್ಥಿತಿ ಎದುರಾಗಬಹುದು’ ಎಂದು ಪಕ್ಷಿ‍ಪ್ರಿಯರು ಹೇಳುತ್ತಾರೆ.

‘ಪಕ್ಷಿಗಳಿಗೆ ನೀರು, ಆಹಾರ ಪೂರೈಸುವ ಶಾಶ್ವತ ಯೋಜನೆಯೊಂದನ್ನು ಜಾರಿಗೊಳಿಸಬೇಕು ಎಂಬ ನಮ್ಮ ಬೇಡಿಕೆಯು ವರ್ಷಗಳಾದರೂ ಸಾಕಾರಗೊಂಡಿಲ್ಲ. ಪಕ್ಷಗಳು ಬಳಲಿ ಮರದಿಂದ ಬೀಳುವುದನ್ನು ನೋಡಲು ಆಗುತ್ತಿಲ್ಲ. ಅವುಗಳಿಗೆ ಕುಡಿಯಲು ನೀರನ್ನಾದರೂ ಪೂರೈಸಬೇಕು’ ಸರ್ಕಾರ ಕೂಡಲೆ ಪಕ್ಷಿಗಳ ನೀರು ಮತ್ತು ಆಹಾರಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದರು.

RELATED ARTICLES
- Advertisment -
Google search engine

Most Popular