ಮದ್ದೂರು: ಸಾಲ ಬಾಧೆ ತಾಳಲಾರದೆ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬೋರಯ್ಯರ ಪುತ್ರ ಎಚ್.ಬಿ. ಶಂಕರಯ್ಯ (64) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.
ಬೇಸಾಯ ನಂಬಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಶಂಕರಯ್ಯ ಕುಟುಂಬಕ್ಕೆ 20 ಗುಂಟೆ ಜಮೀನಿತ್ತು. ಆದರೆ ಇವರ ಮಗ ಕಿಡ್ನಿ ವೈಫಲ್ಯಕ್ಕೀಡಾಗಿ ಅನಾರೋಗ್ಯಕ್ಕೆ ಒಳಗಾಗಿದ್ದನು. ಮಗನ ಚಿಕಿತ್ಸೆ ಮತ್ತು ಜೀವನ ನಿರ್ವಹಣೆಯ ಹೊಣೆ ಹೊತ್ತಿದ್ದ ಇವರಿಗೆ ಬೇಸಾಯದಿಂದ ಆದಾಯ ಬಾರದ ಹಿನ್ನೆಲೆಯಲ್ಲಿ ಸಾಲದ ಮೊರೆ ಹೊಕ್ಕಿದ್ದರು.
ಪತ್ನಿ ಹೆಸರಿನಲ್ಲಿ ಧರ್ಮಸ್ಥಳ ಯೋಜನೆಯಲ್ಲಿ 1.50 ಲಕ್ಷ, ಬ್ಯಾಂಕಿನಲ್ಲಿ 5 ಲಕ್ಷ ಮತ್ತು ಖಾಸಗಿ ಯಾಗಿ 5 ಲಕ್ಷ ಸಾಲ ಮಾಡಿಕೊಂಡಿದ್ದರು.
ಸಾಲ ಮರುಪಾವತಿಸುವ ಚಿಂತೆಯಲ್ಲಿದ್ದ ರೈತ ಗುರುವಾರ ಬೆಳಿಗ್ಗೆ ಮಲಗುವ ಸ್ಥಳದಲ್ಲಿ ಮನೆಯ ಜಂತಿಗೆ ಪಂಚೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮದ್ದೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತ ದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.