ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ ಇವರ ಸಹಕಾರದೊಂದಿಗೆ ಸರಕಾರಿ ನೌಕರರ ಭವನ ಕರಾವಳಿ ಸಭಾಭವನದಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಪ್ರಕಾಶ್ ಬಿ ಎನ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಕರುಣಾಕರ ಬಳ್ಕೂರು ಅವರು ಮಾತನಾಡಿ, 12 ನೇ ಶತಮಾನದಲ್ಲಿ ಸಮಾಜದ ಸುಧಾರಣೆಗಾಗಿ ತನ್ನ ತತ್ವ ಸಿದ್ಧಾಂತ, ಕಾಯಕ ನಿಷ್ಠತೆ, ಭಕ್ತಿಮಾರ್ಗ, ಜ್ಞಾನ ಮಾರ್ಗ, ಕರ್ಮಮಾರ್ಗಗಳ ಮೂಲಕ ಮಡಿವಾಳ ಮಾಚಿದೇವ ಅವರು ತನ್ನ ಬದುಕನ್ನು ಸಮಾಜಕ್ಕಾಗಿ ನೀಡಿದ್ದಾರೆ ಎಂದು ಹೇಳಿದರು. ಮಾಚಿದೇವ ಅವರು ಪವಾಡ ಪುರುಷರಾಗಿದ್ದು ಧರ್ಮ ರಕ್ಷಣೆ, ಕಲ್ಯಾಣ ಕ್ರಾಂತಿ ಸೇರಿದಂತೆ ಸಮಸ್ತ ಶಿವಶರಣರ ಪಾಲಿಗೆ ದೇವನಾಗಿ ಅವರು ದುಡಿದವರು. ಇವರ ವಚನಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿ ಕಾಣಿಸುತ್ತದೆ. ಸಮಬಾಳು ಒದಗಿಸುವುದಕ್ಕಾಗಿ ತನ್ನ ಬದುಕನ್ನು ಸಮರ್ಪಿಸಿದ ಸಾಮಾಜಿಕ ಹರಿಕಾರ ಮಡಿವಾಳ ಮಾಚಯ್ಯನೆಂಬ ಅಗ್ರಗಣ್ಯ ವಚನಕಾರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಕಾರ್ಯದರ್ಶಿ, ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ಪ್ರದೀಪ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ವರದಿ: ಶಂಶೀರ್ ಬುಡೋಳಿ



