ಹೊಸದಿಲ್ಲಿ: ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭ ಮೇಳ ನಿರ್ವಹಣೆಯಲ್ಲಿ ಉತ್ತರ ಪ್ರದೇಶ ಸರಕಾರ ನಿರ್ಲಕ್ಷವಹಿಸಿದೆ ಮತ್ತು ವೈಫಲ್ಯವಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಈ ಕುರಿತು ವಕೀಲ ವಿಶಾಲ್ ತಿವಾರಿ ಎಂಬವರು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ವಿವಿಧ ರಾಜ್ಯಗಳಿಂದ ಕುಂಭ ಮೇಳಕ್ಕೆ ಆಗಮಿಸುವ ಭಕ್ತರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವಿಶಾಲ್ ತಿವಾರಿ, ತುರ್ತು ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ತಮ್ಮ ಮನವಿಯನ್ನು ಪ್ರಸ್ತಾಪಿಸಲಾಗುವುದು ಎಂದು ಹೇಳಿದ್ದಾರೆ.
ʼಮಹಾ ಕುಂಭಕ್ಕೆ ಆಗಮಿಸಿದ ಭಕ್ತರ ಸುರಕ್ಷಿತಗಾಗಿ ಸಾಮೂಹಿಕವಾಗಿ ಕಾರ್ಯ ನಿರ್ವಹಿಸಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಬೇಕು. ಪ್ರಯಾಗ್ ರಾಜ್ ನಲ್ಲಿ ಭಕ್ತರಿಗೆ ನೆರವು ಕೇಂದ್ರಗಳನ್ನು ಸ್ಥಾಪಿಸಬೇಕು. ಈ ಮೂಲಕ ಭಕ್ತರಿಗೆ ಸರಿಯಾದ ಮಾರ್ಗದರ್ಶನ ಮತ್ತು ಮಾಹಿತಿಯನ್ನು ನೀಡಬೇಕು. ವಿವಿಧ ಭಾಷೆಗಳಲ್ಲಿ ರಸ್ತೆಗಳು ಸೇರಿದಂತೆ ಮಾಹಿತಿಗಳನ್ನು ನೀಡುವ ಪ್ರಕಟಣೆಗಳು ಮತ್ತು ಫಲಕಗಳನ್ನು ಹಾಕಲು ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ಮಹಾಕುಂಭ ಮೇಳದಲ್ಲಿನ ವಿಐಪಿ ಸಂಚಾರ ಸಾಮಾನ್ಯ ಭಕ್ತರ ಸುರಕ್ಷತೆಗೆ ಅಡ್ಡಿಯಾಗಬಾರದು. ಮಹಾಕುಂಭದಲ್ಲಿ ಭಕ್ತರಿಗೆ ಪ್ರವೇಶ ಮತ್ತು ನಿರ್ಗಮನಕ್ಕೆ ಗರಿಷ್ಠ ಸ್ಥಳಾವಕಾಶ ಒದಗಿಸಬೇಕು. ಜನವರಿ 29ರಂದು ಸಂಭವಿಸಿದ ಕಾಲ್ತುಳಿತದ ಘಟನೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಮತ್ತು ಘಟನೆಗೆ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ಪಿಐಎಲ್ ನಲ್ಲಿ ಆಗ್ರಹಿಸಲಾಗಿದೆ.