ಮೈಸೂರು: ಮಹಿಷಾ ದಸರಾ ಒಂದು ಅನಾಚಾರ ಅಸಹ್ಯ ಅಬದ್ದ. ಇದು ಸಿದ್ದರಾಮಯ್ಯ ಸಿಎಂ ಆದಾಗ ಆರಂಭವಾಗಿತ್ತು. ಬಳಿಕ ನಮ್ಮ ಸರ್ಕಾರ ಬಂದಾಗ ಇದನ್ನು ನಿಲ್ಲಿಸಿದ್ದೆವು. ಅನಾಚಾರ ಮಾಡಲು ಅವಕಾಶ ಕೊಡಬೇಡಿ ಎಂದು ಜಿಲ್ಲಾಡಳಿತ, ಸರ್ಕಾರ ಹಾಗೂ ಪೊಲೀಸರಿಗೆ ಸಂಸದ ಪ್ರತಾಪ್ ಸಿಂಹ ಅವರು ಮನವಿ ಮಾಡಿದ್ದಾರೆ.
ಮಹಿಷ ದಸರಾ ಆಚರಣಾ ಸಮಿತಿಯವರು ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ತೀರ್ಮಾನ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿಮಗೆ ಮಹಿಷಾಸುರನ ಮೇಲೆ ಭಕ್ತಿ ಇದ್ದರೆ, ನಿಮ್ಮ ಮನೆಯಲ್ಲಿ ಪೋಟೋ ಇಟ್ಟುಕೊಂಡು ನಿನ್ನ ತರಾ ಮಗನನ್ನು ದಯಪಾಲಿಸು ಎಂದು ಪೂಜೆ ಮಾಡಿ. ಆದರೆ, ಚಾಮುಂಡಿ ಬೆಟ್ಟದಲ್ಲಿ ಇದು ಸರಿ ಅಲ್ಲ ಎಂದು ಹೇಳಿದರು.
ಒಂದು ವೇಳೆ ಜಿಲ್ಲಾಡಳಿತ ಅವಕಾಶ ಕೊಟ್ಟರೆ, ನಾವು ಹೋಗಿ ಅಸಹ್ಯವನ್ನು ತಡೆಯುತ್ತೇವೆ. ಕಾನೂನು ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ ನಾವು ಸಂಘರ್ಷಕ್ಕೂ ಸಿದ್ದರಾಗಿದ್ದೇವೆ ಎಂದರು.
ಈ ಅಸಹ್ಯ ಮಾಡುವ ಮನೆಯಲ್ಲಿ ಹೆಂಡತಿಯರು ಚಾಮುಂಡಿ ಭಕ್ತರಾಗಿರುತ್ತಾರೆ. ಇವರು ರಾಜಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಮೈಸೂರಿಗರು ನಮ್ಮ ಹೋರಾಟಕ್ಕೆ ಕೈ ಜೋಡಿಸಬೇಕು. ಆಷಾಢ ಮಾಸದಲ್ಲಿ ಲಕ್ಷಾಂತರ ಜನ ಬಂದು ಪೂಜೆ ಮಾಡುತ್ತಾರೆ. ನಮ್ಮ ತಾಯಿಗೆ ಅವಮಾನ ಆದರೆ ರೋಷ ಬರುತ್ತದೆ ಅಲ್ಲವಾ? ಅದೇ ರೀತಿ ಚಾಮುಂಡೇಶ್ವರಿ ನಮ್ಮ ತಾಯಿ, ಅವಳು ಬೇಕು ಬೇಡವನ್ನು ಕೊಟ್ಟಿದ್ದಾಳೆ. ಅವಳಿಗೆ ಅವಮಾನ ಆದರೆ ಯಾರು ಸಹಿಸಲ್ಲ. ಸಿದ್ದರಾಮಯ್ಯ ಬಂದ ಕೂಡಲೇ ಧರ್ಮ ವಿರೋಧಿಗಳಿಗೆ ಶಕ್ತಿ ಬರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಪ್ರಚೋದನಾಕಾರಿ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಮಾತನಾಡಿ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಪ್ರಚೋದನಕಾರಿ ಅಲ್ವಾ? ಕಾಂಗ್ರೆಸ್ ನಾಯಕರ ಮನಸ್ಥಿತಿ ಮೊದಲಿನಿಂದಲೂ ಎಲ್ಲರಿಗೂ ಗೊತ್ತಿದೆ. ಜನರನ್ನು ಗ್ಯಾರಂಟಿ ಹೆಸರಲ್ಲಿ ಮರಳು ಮಾಡಿ ಅಧಿಕಾರಕ್ಕೆ ಬಂದವರು. ಕಾಂಗ್ರೆಸ್ ನಾಯಕರಲ್ಲಿ ಸನಾತನ ವಿರೋಧಿ ಮನಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.