ಪಿರಿಯಾಪಟ್ಟಣ: ವಿದ್ಯಾರ್ಥಿ ಜೀವನದಲ್ಲಿ ಸಿಕ್ಕ ಉತ್ತಮ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗುವಂತೆ ಹಾಸ್ಯ ಕಲಾವಿದ ವಿನೋದ್ ಗೊಬ್ಬರಗಾಲ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬಿಜಿಎಸ್ ವಿದ್ಯಾಸಂಸ್ಥೆ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು, ಪ್ರತಿಯೊಬ್ಬರಲ್ಲೂ ತನ್ನದೇ ಆದ ವಿಶೇಷ ಪ್ರತಿಭೆಗಳಿರುತ್ತವೆ ಅದನ್ನು ಸೂಕ್ತ ಸಮಯದಲ್ಲಿ ಸೂಕ್ತ ವೇದಿಕೆಯಲ್ಲಿ ಪ್ರದರ್ಶಿಸಿದಾಗ ಜಯ ಸಾಧಿಸಬಹುದು ಎಂದರು.

ಚಲನಚಿತ್ರ ಸಹನಟ ಕಲಾರತಿ ಮಹದೇವ್ ಅವರು ಮಾತನಾಡಿ, ವಿದ್ಯಾರ್ಥಿ ಜೀವನ ನಮ್ಮ ಜೀವನದ ದಿಕ್ಕು ಬದಲಿಸುವ ಶಕ್ತಿ ಹೊಂದಿದೆ, ನಾವೆಲ್ಲರೂ ಪರಭಾಷ ವ್ಯಾಮೋಹ ಬಿಟ್ಟು ನಾವು ಹುಟ್ಟಿ ಬೆಳೆದ ಕರುನಾಡಿನ ಇತಿಹಾಸ ಬಗ್ಗೆ ಇತರರಿಗೆ ತಿಳಿಸಬೇಕು ಎಂದರು.
ಉಪ ಪ್ರಾಂಶುಪಾಲರಾದ ಮಹದೇವ್ ಅವರು ಮಾತನಾಡಿ, ಪೋಷಕರು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಶ್ರೇಣಿ ಪಡೆದು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಜೀವನ ನಡೆಸುವಂತೆ ತಿಳಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಹೆಚ್.ಎನ್ ಸುಧಾಕರ್ ಅವರು ಮಾತನಾಡಿ ಸಂಸ್ಥೆ ಪ್ರಾರಂಭವಾದಾಗಿನಿಂದ ಪೂಜ್ಯರ ಮಾರ್ಗದರ್ಶನದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ಶಿಕ್ಷಕರ ಸತತ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಕಲಿಕೆಯಿಂದ ಉತ್ತಮ ಫಲಿತಾಂಶದ ಕಡೆ ಗಮನಹರಿಸಲಾಗುತ್ತಿದೆ ಎಂದರು.

ಹಾಸ್ಯ ಕಲಾವಿದ ವಿನೋದ್ ಗೊಬರಗಾಲ ಹಾಗು ಚಲನಚಿತ್ರ ಸಹನಟ ಕಲಾರತಿ ಮಹದೇವ್ ಅವರು ಸಾಮಾಜಿಕ ಸಂದೇಶ ಸಾರುವ ಗೀತೆಗಳನ್ನು ಹಾಡಿ ಹಾಸ್ಯದ ಮೂಲಕ ಎಲ್ಲರೂ ರಂಜಿಸಿದರು, ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ತಮ್ಮ ಅನಿಸಿಕೆ ಹಂಚಿಕೊಂಡರು.
ಈ ಸಂದರ್ಭ ಮುಖ್ಯ ಶಿಕ್ಷಕರಾದ ಶ್ರೀನಿವಾಸ್, ಪ್ರಭಾಕರ್ ಸಿಂಗ್, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನವೀನ್ ಕುಮಾರ್, ಪ್ರಾಂಶುಪಾಲರಾದ ಗೋವಿಂದೇಗೌಡ, ಕೆ.ಆರ್ ಪ್ರವೀಣ್, ಮುಖ್ಯ ಶಿಕ್ಷಕಿ ದಿವ್ಯ, ಉಪನ್ಯಾಸಕರು ಮತ್ತು ಶಿಕ್ಷಕರು ಹಾಜರಿದ್ದರು.