ಕಲಬುರಗಿ: ಕಾಂಗ್ರೆಸ್ ಪಕ್ಷವನ್ನು ವಿಭಜಿಸಲು ಮತ್ತು ಶಾಸಕರನ್ನು ಗುರಿಯಾಗಿಸಿ ಕೇಂದ್ರ ಸರ್ಕಾರ ಸಂಚು ನಡೆಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದರು.
ಬಳ್ಳಾರಿ ಸಂಸದ ಇ. ತುಕಾರಾಂ, ಶಾಸಕ ಭರತ್ ರೆಡ್ಡಿ, ಗಣೇಶ್ ಮತ್ತು ಇತರ ಮುಖಂಡರ ಮನೆ ಮೇಲೆ ಈಡಿ ದಾಳಿ ಸಂಬಂಧ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಗಮದ ಹಣ ದುರ್ಬಳಕೆ ವಿಚಾರ ಈಡಿಗೆ ಬಿಟ್ಟಿದ್ದು, ಚುನಾವಣೆ ವೇಳೆಗೆ ಸಾವಿರಾರು ಕೋಟಿ ರೂ. ಹಣ ಸೀಝ್ ಆಗಿದ್ದರೂ ಅದು ಎಲ್ಲಿದೆ ಎಂಬ ಪ್ರಶ್ನೆ ಎಳೆದಿದ್ದಾರೆ. ಚುನಾವಣೆ ಖರ್ಚು ಯಾರಿಗಿಂತಲೂ ಹೆಚ್ಚು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.
ಕಾಲ್ತುಳಿತ ಮತ್ತು ಜಾತಿ ಗಣತಿ ಸೇರಿದಂತೆ ನಾಲ್ಕು ವಿಷಯಗಳ ಕುರಿತು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಚರ್ಚೆ ನಡೆದರೂ, ಮಂತ್ರಿ ಮಂಡಲ ಪುನರ್ ರಚನೆಯ ಬಗ್ಗೆ ಯಾವುದೇ ಚರ್ಚೆ ಇಲ್ಲವೆಯೆಂದು ಖರ್ಗೆ ಸ್ಪಷ್ಟಪಡಿಸಿದರು.
ಕಾಲ್ತುಳಿತ ವಿಚಾರದಲ್ಲಿ ಬಿಜೆಪಿ ರಾಜೀನಾಮೆ ಒತ್ತಾಯಿಸಿರುವುದಕ್ಕೆ ಪ್ರತಿಯಾಗಿ, ಕುಂಭಮೇಳದ ಸಂದರ್ಭದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಿದರಾ? ಎಂದು ಪ್ರಶ್ನಿಸಿದರು. ಈ ಘಟನೆ ಆಕಸ್ಮಿಕವಾಗಿದೆ ಮತ್ತು ಸಂಬಂಧಪಟ್ಟವರು ಕ್ಷಮೆಯಾಚಿಸಿದ್ದಾರೆ, ನೊಂದವರ ನೆರವಿಗೆ ರಾಹುಲ್ ಗಾಂಧಿ ಕೂಡ ಕರೆ ನೀಡಿದ್ದಾರೆ ಎಂದರು.
ಲೋಕಸಭೆಯ ಡೆಪ್ಯೂಟಿ ಸ್ಪೀಕರ್ ಹುದ್ದೆ ಕಳೆದ ಮೂರು ಅವಧಿಯಲ್ಲೂ ಖಾಲಿ ಇರುವುದು ಸಂವಿಧಾನ ವಿರೋಧಿ ನಡೆ ಎಂದು ಖರ್ಗೆ ಟೀಕಿಸಿದರು.