ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹುಣಸೂರು ವಲಯದ ಹತ್ತಿರ ರಿಸರ್ವ್ ಫಾರೆಸ್ಟ್ನಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ವ್ಯಕ್ತಿ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನಾಗರಹೊಳೆ ಉದ್ಯಾನವನ ವ್ಯಾಪ್ತಿಯ ಹುಣಸೂರು ವಲಯದ ಹನಗೋಡು ವ್ಯಾಪ್ತಿಯ ಅಯ್ಯನಕೆರೆ ಹಾಡಿಯ ಬಳಿಯ ಉಡುವೆಪುರದ ರೈತ ಗಣೇಶ್ (೫೮) ಎಂದು ಗುರುತಿಸಲಾಗಿದೆ.
ಈತ ಎಂದಿನಂತೆ ಗ್ರಾಮದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಅಂಚಿನಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಿದ್ದು, ನಿನ್ನೆ ಸಂಜೆ ಜಾನುವಾರುಗಳು ಮನೆಗೆ ಬಂದರೂ ಗಣೇಶ್ ಮನೆಗೆ ಬಂದಿರಲಿಲ್ಲ. ಅನುಮಾನಗೊಂಡು ಕುಟುಂಬಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದಾಗ ಗಣೇಶ್ ಅವರ ಮೃತದೇಹ ಮುದ್ದೇನಹಳ್ಳಿಯ ಬಳಿಯ ಅರಣ್ಯ ಪ್ರದೇಶದ ಬಫರ್ ಏರಿಯಾದ ಪ್ರದೇಶದಲ್ಲಿ ಇರುವ ಕೆರೆ ಬಳಿ ಸಂಜೆ ದೊರಕಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ಹುಲಿಯನ್ನು ಸೆರೆ ಹಿಡಿಯಬೇಕು ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಭಾಗದ ರೈತರಿಗೆ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಬಿಡದಂತೆ ಸೂಚನೆ ನೀಡಲಾಗಿತ್ತು. ಆದರೂ ರೈತರು ಮಾತು ಕೇಳದೆ ಅರಣ್ಯ ಪ್ರವೇಶ ಮಾಡಿದ್ದು ಈ ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.