ಮದ್ದೂರು (ಮಂಡ್ಯ) : “ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮಂಡ್ಯ ಜಿಲ್ಲೆಯ ಋಣ ತೀರಿಸುತ್ತೇನೆ” ಎಂದು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ವೇಳೆ ಜಿಲ್ಲೆಯ ಗಡಿಭಾಗವಾದ ನಿಡಘಟ್ಟದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭೂತಪೂರ್ವ ಸ್ವಾಗತ ಸ್ವೀಕರಿಸಿದ ಬಳಿಕ ಪಟ್ಟಣದ ಶಿವಪುರ ಹಾಗೂ ಐ.ಬಿ. ವೃತ್ತದಲ್ಲಿ ಹೆದ್ದಾರಿಯುದ್ದಕ್ಕೂ ಕಿಕ್ಕಿರಿದು ನೆರೆದಿದ್ದ ಜನರನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ಗೆಲ್ಲಿಸಿದ್ದಿರಿ. ಮಂಡ್ಯ ಜಿಲ್ಲೆಗು,ನನಗೂ, ದೇವೇಗೌಡ್ರುಗು ಅನುಬಂಧ ಇದೆ. ಕಳೆದ ಚುನಾವಣೆಯಲ್ಲಿ ನಾನು ನಿಲ್ಲಲು ಒತ್ತಡ ಹಾಕಿದ್ರಿ. ನರೇಂದ್ರ ಮೋದಿ ನಾಯಕತ್ವದಲ್ಲಿ ಕೇಂದ್ರದಲ್ಲಿ ಎರಡೂ ಇಲಾಖೆ ಕೊಟ್ಟಿದ್ದಾರೆ. ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಸ್ಥಾನ ಕೊಟ್ಟಿದ್ದಾರೆ.ರೈತರ ಸಮಸ್ಯೆಗಳನ್ನು ಬಗೆಹರಿಸುವ ಆಸೆ ನನ್ನದು. ಯುವಕರಿಗೆ ಉದ್ಯೋಗಗಳನ್ನು ಕೊಡಿಸುವ ಜವಾಬ್ದಾರಿ ಇದೆ. ನನ್ನ ಇಲಾಖೆ ಮಂತ್ರಿ ಅಲ್ಲ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡ್ತೇನೆ.
ಜಿಲ್ಲೆಯ ಅಭಿವೃದ್ಧಿ ಕಂಡಿಲ್ಲ. 50 ವರ್ಷದಿಂದ ಹಾಗೇ ಇದೆ. ನನ್ನ ಬೆಳೆಸಿದ ಜಿಲ್ಲೆಯ ಜನತೆಗೆ ಕೃತಜ್ಞತಾ ಸಲ್ಲಿಸುತ್ತೇನೆ. 15 ದಿನ ಸಮಯ ಕೊಡಿ ಇಲಾಖೆ ಬಗ್ಗೆ ಮಾಹಿತಿ ಪಡೆಯಬೇಕಿದೆ. ಬಳಿಕ ಪ್ರತಿ ಹಳ್ಳಿಗೆ ಬರ್ತೇನೆ. ರಾಷ್ಟ್ರದಲ್ಲಿ ಕೆಲಸ ಮಾಡಿ ನಮ್ಮ ಸಮಾಜ ಉಳಿಸಬೇಕು. ನಿಖಿಲ್ ಅವರಿಗೆ ಜವಾಬ್ದಾರಿ ಕೊಟ್ಟಿದ್ದೇನೆ ಜಿಲ್ಲೆಯಲ್ಲಿ ಅವರು ಇರ್ತಾರೆ. ಜಿಲ್ಲೆಯ ಜನರ ಕಷ್ಟ ಸುಖದಲ್ಲಿ ನಿಖಿಲ್ ಇರ್ತಾರೆ ನಿಮ್ಮ ಋಣದ ಭಾರ ಇದೆ ನಿಮ್ಮ ಸೇವೆ ಮಾಡ್ತೇನೆ. ಕೊನೆಯವರೆಗೂ ನಿಮ್ಮ ಆಶೀರ್ವಾದ ಇರಲಿ. ಮುಖ್ಯವಾಗಿ ಜಿಲ್ಲೆಗೆ ಕಾವೇರಿ ನೀರಿನ ವಿಷಯದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಪ್ರಧಾನಿಯವರ ಗಮನಕ್ಕೆ ತಂದು ನ್ಯಾಯ ಒದಗಿಸುವ ಕೆಲಸವನ್ನು ಮಾಡುವುದೇ ನನ್ನ ಪರಮ ಗುರಿಯಾಗಿದೆ ಎಂದರು.