ಮಡಿಕೇರಿ: ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿ ಭೇಟಿಗಾಗಿ ಮಡಿಕೇರಿಗೆ ಬಂದಿದ್ದ ಮಂಡ್ಯ ಮೂಲದ ಯುವಕನಿಗೆ ನರಕ ದರ್ಶನವಾಗಿದೆ. ಮಡಿಕೇರಿಗೆ ಬಂದಿದ್ದ ಯುವಕನನ್ನ ಖಾಸಗಿ ಹೋಂ ಸ್ಟೇ ನಲ್ಲಿ ಬಂಧಿಸಿಟ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಮಹದೇವ್ಗೆ ಇತ್ತೀಚೆಗೆ ಫೇಸ್ಬುಕ್ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಯ ಭೇಟಿಯಾಗಿ ಶುಕ್ರವಾರ ಸಂಜೆ ಮಡಿಕೇರಿಗೆ ಬಂದಿದ್ದಾನೆ.
ಒಂಟಿಯಾಗಿ ಬಂದಿದ್ದ ಮಹದೇವ್ನನ್ನ ಮಡಿಕೇರಿಯ ಮಂಗಳಾದೇವಿ ನಗರದ ಮನೆಯೊಂದಕ್ಕೆ ಕರೆಸಿಕೊಂಡಿದ್ದಾಳೆ. ಕೆಲ ಕಾಲ ಆತನೊಂದಿಗೆ ಮಾತನಾಡಿ ಡ್ರಿಂಕ್ಸ್ ಕೂಡ ಮಾಡಿ ಮಡಿಕೇರಿಯ ಪ್ರವಾಸಿತಾಣಗಳ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದೇ ವೇಳೆಯಲ್ಲಿ ಆಕೆಗೊಂದು ಫೋನ್ ಕರೆ ಬಂದಿದೆ. ತಕ್ಷಣ ನನ್ನ ಸಂಬಂಧಿಕರು ಯಾರೋ ಮೃತಪಟ್ಟಿದ್ದಾರೆ ತಾನು ಹೋಗಿ ಬರುತ್ತೇನೆ ಎಂದು ಅಲ್ಲಿಂದ ಹೊರಟಿದ್ದಾಳೆ. ಅದೇ ಸಂದರ್ಭದಲ್ಲಿ ರೂಮಿಗೆ ಬಂದ ಮೂವರು ಯುವಕರು ತನ್ನ ಬಳಿಯಿದ್ದ ಹಣ ವಸ್ತುಗಳೆಲ್ಲವನ್ನ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ.
ಭಾರೀ ಪ್ರಮಾಣದ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಕೊನೆಗೆ ಮಹದೇವ್ ಮೂವರಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದಾನೆ. ಆದ್ರೂ ಮಹದೇವ್ನನ್ನು ಬೆನ್ನಟ್ಟಿದ ಮೂವರು ಆಟೋದಲ್ಲಿ ಅಪಹರಣ ಮಾಡಲು ಮುಂದಾಗಿದ್ದಾರೆ. ಅಪಹರಣಕ್ಕೆ ಯತ್ನಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮೂವರಿಂದ ತಪ್ಪಿಸಿಕೊಂಡ ಮಹದೇವ್, ಮಡಿಕೇರಿ ನಗರ ಠಾಣೆಗೆ ಅರೆಬೆತ್ತಲಾಗಿ ಓಡೋಡಿ ಬಂದು ದೂರು ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡುವಷ್ಟರಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಮಹದೇವ್ ಹಲ್ಲೆಗೆ ಬಳಸಲಾದ ಮಾರಕಾಸ್ತ್ರಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೊಂದು ಹನಿಟ್ರ್ಯಾಪ್ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ
ಹಾನಿಟ್ಯ್ರಾಪ್ ಪ್ರಕರಣದ ರುವಾರಿ ರಚನಾ ಮಡಿಕೇರಿ ನಗರದ ಅಶೋಕಪುರದ ನಿವಾಸಿಯಾಗಿದ್ದಾಳೆ. ಈಕೆ ಹಲವಾರು ವರ್ಷಗಳ ಹಿಂದೆ ಪೊಲೀಸ್ ಪೆದೆಯೊಂದಿಗೆ ಮದುವೆ ಆಗಿದ್ದಳು. ಈಕೆ ಸಾಕಷ್ಟು ಕುಡಿತದ ಚಟಕ್ಕೆ ಒಳಗಾಗಿದ್ದರಿಂದ ಬೇಸತ್ತ ಗಂಡ ವಿವಾಹ ವಿಚ್ಚೇದನ ನೀಡಿದ್ದರಂತೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.



