ಮಂಗಳೂರು (ದಕ್ಷಿಣ ಕನ್ನಡ): ಮೀನುಗಾರನೋರ್ವ ಸಮುದ್ರ ತೀರದ ಪಾಳು ಬಿದ್ದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಮೇಶ್ವರ ಉಚ್ಚಿಲದ ರೆಸಾರ್ಟ್ ನ ಮುಂಭಾಗದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶಶೀಂದ್ರ.ಎಮ್ ಉಚ್ಚಿಲ್ (75) ಎಂದು ಗುರುತಿಸಲಾಗಿದೆ.
ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದ ಶಶೀಂದ್ರ ಅವರು ಸ್ನೇಹಿತನ ಜೊತೆ ರೆಸಾರ್ಟ್ ಮುಂಭಾಗದ ಪಾಳು ಬಿದ್ದ ಬಾವಿಯ ಕಟ್ಟೆ ಸಮೀಪ ಇದ್ದಾಗ ಆಯತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಬಾವಿಯಲ್ಲಿ ಕೇವಲ ಮೂರಡಿಯಷ್ಟು ನೀರಿದ್ದ ಪರಿಣಾಮ ಶಶೀಂದ್ರ ಅವರ ತಲೆಗೆ ಗಂಭೀರ ಏಟು ತಗುಲಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.
ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.