ಮಂಗಳೂರು (ದಕ್ಷಿಣ ಕನ್ನಡ): ಅಮ್ಟೂರು- ಕರಿಂಗಾನ ಕ್ರಾಸ್ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಯಾಕೆಂದ್ರೆ ಅಮ್ಟೂರು ಕರಿಂಗಾನ ರಸ್ತೆ ಸುಮಾರು ಆರು ಕಿ.ಮೀ ಇದ್ದು, ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಹೊಂಡಗಳಿಂದ ಕೂಡಿದ್ದು, ಅಪಾಯಕಾರಿಯಾಗಿದೆ. ರಸ್ತೆಯ ಇಕ್ಕೆಲಗಳ ಮಣ್ಣು ಮಳೆಗೆ ಕರಗಿ ಹೋಗಿದ್ದು, ದ್ವಿಚಕ್ರವಾಹನ ಸವಾರರು ಜೀವಭಯದಲ್ಲಿ ಸಂಚಾರ ಮಾಡುತ್ತಿದ್ದಾರೆ.
ಕರಿಂಗಾಣದಲ್ಲಿ ಶಾಲೆ,ಹಾಗೂ ಚರ್ಚ್ ಇದ್ದು, ಗ್ರಾಮೀಣ ಭಾಗದ ಅನೇಕರು ಇದೇ ರಸ್ತೆಯನ್ನು ಆಶ್ರಯಿಸಿಕೊಂಡಿದ್ದಲ್ಲದೆ, ಹೆದ್ದಾರಿ ಸಂಪರ್ಕದ ಪ್ರಮುಖ ಕೊಂಡಿಯಾಗಿ ಈ ರಸ್ತೆ ಪಾತ್ರವಹಿಸುತ್ತದೆ.
ಪಸ್ತುತದ ದಿನಗಳಲ್ಲಿ ಬಿಸಿರೋಡು- ಅಡ್ಡಹೊಳೆವರಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು,ಹೆದ್ದಾರಿಯಲ್ಲಿ ಸಂಚಾರ ಮಾಡುವುದೇ ದುಸ್ತರವಾಗಿದೆ.
ಈ ಕಾರಣಕ್ಕಾಗಿ ಬಿಸಿರೋಡಿನಿಂದ ಕಲ್ಲಡ್ಕವರೆಗೆ ಪುತ್ತೂರು, ವಿಟ್ಲ ಮತ್ತು ಉಪ್ಪಿನಂಗಡಿ ಭಾಗಕ್ಕೆ ತೆರಳುವ ವಾಹನ ಸವಾರರು ಬಿಸಿರೋಡಿನಿಂದ ನೇರವಾಗಿ ಪಾಣೆಮಂಗಳೂರು ಮೂಲಕ ಮಾರ್ನಬೈಲಿಗೆ ಅಲ್ಲಿಂದ ಕರಿಂಗಾನ ಮತ್ತು ಅಮ್ಟೂರು ಕ್ರಾಸ್ ಮೂಲಕ ಕಲ್ಲಡ್ಕ ಪೇಟೆಗೆ ಬರುತ್ತಾರೆ. ಹಾಗಾಗಿ ಈ ರಸ್ತೆ ಇತ್ತೀಚಿನ ಎರಡು ವರ್ಷಗಳಿಂದ ಬಹುಬೇಡಿಕೆಯ ರಸ್ತೆಯಾಗಿದ್ದು,ವಾಹನ ಸಂಚಾರದ ಸಂಖ್ಯೆ ಯಲ್ಲಿ ಹೆಚ್ಚಳವಾಗಿದೆ.
ಇದರ ಜೊತೆ ಅಕ್ರಮ ಕಲ್ಲು ಮತ್ತು ಮರಳು ಸಾಗಾಣಿಕೆ ಮಾಡುವ ಘನಗಾತ್ರದ ವಾಹನಗಳು ಇದೇ ರಸ್ತೆಯ ಮೂಲಕ ಸಂಚಾರ ಮಾಡುತ್ತಿದೆ. ಅಕ್ರಮವಾಗಿ ಬೇರೆ ಬೇರೆ ವಸ್ತುಗಳ ಸಾಗಾಣಿಕೆ ಮಾಡುವ ವಾಹನಗಳು ಅತೀ ವೇಗದಿಂದ ಸಂಚಾರ ಮಾಡುವುದರಿಂದ ಅಪಘಾತಕ್ಕೆ ಕಾರಣವಾಗಬಹುದು ಈ ಬಗ್ಗೆ ಪೋಲೀಸ್ ಇಲಾಖೆ ಹೆಚ್ಚಿನ ಮುತುರ್ವಜಿಯನ್ನು ವಹಿಸಿಕೊಂಡು ಕ್ರಮಕೈಗೊಳ್ಳುಬೇಕು ಎಂದು ಒತ್ತಾಯಿಸಿದ್ದಾರೆ.