ಮಂಗಳೂರು (ದಕ್ಷಿಣ ಕನ್ನಡ):ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79) ಅವರು ಯಕೃತ್ ಸಮಸ್ಯೆಯಿಂದ ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು, ಅವರ ಪಾರ್ಥಿವ ಶರೀರ ಇಂದು ಬೆಳಗ್ಗೆ 3.30 ಕ್ಕೆ ಹಳೆಕೋಟೆ ನಿವಾಸಕ್ಕೆ ಆಗಮಿಸಿತು.
ಪಾರ್ಥೀವ ಶರೀರ ಸ್ವಗೃಹಕ್ಕೆ ಆಗಮಿಸುತ್ತಿದ್ದಂತೆ ಬೆಳ್ತಂಗಡಿ ಶೋಕಸಾಗರದಲ್ಲಿ ಮುಳುಗಿತ್ತು. ಬಳಿಕ ಕುಟುಂಬ ವರ್ಗಕ್ಕೆ ಮನೆಯಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಾರ್ಥಿವ ಶರೀರದ ಅಂತಿಮ ವಿಧಿ ನೆರವೇರಿಸಿ ಬಳಿಕ ಕೊಂಚ ಸಮಯ ಅವರ ಆಪ್ತ ಅಭಿಮಾನಿ ವರ್ಗಕ್ಕೆ ಅಂತಿಮನ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.
ಬೆಳಗ್ಗೆ 9 ಗಂಟೆಗೆ ಸರಿಯಾಗಿ ಹಳೆಕೋಟೆ ಮನೆಯಿಂದ ಬೆಳ್ತಂಗಡಿ ತಾಲೂಕು ಕ್ರೀಡಾಂಗಣಕ್ಕೆ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಸಾರ್ವಜನಿಕ ದರ್ಶನಕ್ಕಾಗಿ ಕೊಂಡೊಯ್ಯಲಾಯಿತು.
ನಾಡಿನೆಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಬೆಳ್ತಂಗಡಿಗೆ ಆಗಮಿಸಿ ಅಂತಿಮ ದರ್ಶನ ಪಡೆದರು.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ನೇತೃತ್ವದಲ್ಲಿ ಸರಕಾರದ ಪರವಾಗಿ ಅಂತಿಮ ಗೌರವ ನಮನ ಸಲ್ಲಿಸಲಾಯಿತು. ಜೊತೆಗೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪ್ರತಾಪ ಸಿಂಹ ನಾಯಕ್ ರಿಂದ ಅಂತಿಮ ನಮನ ಸಲ್ಲಿಸಲಾಯಿತು.
ಬೆಳ್ತಂಗಡಿ ಕ್ರೀಡಾಂಗಣದಿಂದ ಹೊರಟ ಅಂತಿಮ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದು ,ಕುವೆಟ್ಟು ಗ್ರಾಮದ ಕೇದೆ ಮನೆಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಬಂಗೇರರನ್ನು ಕಳೆದುಕೊಂಡ ಅವರ ಆಪ್ತರಲ್ಲಿ ಓರ್ವರಾಗಿದ್ದ ವೇಗಸ್ ಎಂಬವರು ಇತ್ತೀಚೆಗೆ ಅಪಘಾತಕ್ಕೊಳಗಾಗಿದ್ದರು. ಅವರು ಆಂಬ್ಯುಲೆನ್ಸ್ ನಲ್ಲೇ ಬಂದು ಅಂತಿಮ ದರ್ಶನ ಪಡೆದರು.