ಮಂಗಳೂರು (ದಕ್ಷಿಣ ಕನ್ನಡ): ಜಾಮಿಯಾ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ 55ನೇ ವಾರ್ಷಿಕ ಮಹಾಸಮ್ಮೇಳನ ನವೆಂಬರ್ 22ರಿಂದ 24ರವರೆಗೆ ನಡೆಯಲಿದೆ. ಇದರ ಪ್ರಚಾರಾರ್ಥ ‘ಮಜ್ಲಿಸುಲ್ ಉಲಮಾಯಿಸ್ಸಅದಿಯ್ಯನ್ ಕರ್ನಾಟಕ’ ವತಿಯಿಂದ ಅ.29ರಂದು ‘ಕರ್ನಾಟಕ ಸಅದೀಸ್ ಅಸೆಂಬ್ರೇಜ್’ ಕಾರ್ಯಕ್ರಮ ಪಾಣೆಮಂಗಳೂರಿನ ಸಾಗರ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸಅದಿಯ್ಯ ಪ್ಲಾನಿಂಗ್ ಬೋರ್ಡ್ ಕರ್ನಾಟಕ ಚೆಯರ್ಮ್ಯಾನ್ ಹಾಫಿಳ್ ಯಾಕೂಬ್ ಸಅದಿ ನಾವೂರು ತಿಳಿಸಿದ್ದಾರೆ.
ಮಂಗಳೂರು ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದ ಪ್ರೆಸ್ಮೀಟ್ ನಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಜಾಮಿಯಾ ಸಅದಿಯ್ಯ ಪ್ರೊಫೆಸರ್ಗಳಾದ ಕೆ.ಕೆ.ಹುಸೈನ್ ಬಾಖವಿ ವಯನಾಡ್, ಉಬೈದುಲ್ಲಾಹಿ ಸಅದಿ ನದ್ವಿ, ಸ್ವಾಲಿಹ್ ಸಅದಿ ತಳಿಪರಂಬ ಅವರಿಂದ ವಿವಿಧ ವಿಷಯಗಳಲ್ಲಿ ತರಗತಿಗಳು ನಡೆಯಲಿವೆ. ಸಮಾರೋಪದಲ್ಲಿ ಜಾಮಿಯಾ ಸಅದಿಯ್ಯದ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾಗಿ ಆಯ್ಕೆಯಾಗಿರುವ ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್ರಿಗೆ ನೂರುಲ್ ಉಲಮಾ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಜಾಮಿಯಾ ಸಅದಿಯ್ಯ ಸದರ್ ಮುದಗ್ರಿಸ್ ಶೈಖುನಾ ಕೆ.ಕೆ. ಹುಸೈನ್ ಬಾಖವಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಧ್ಯಕ್ಷ ಸೈಯದ್ ಕೆ.ಎಸ್.ಆಟಕೋಯ ತಂಬಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಝೈನುಲ್ ಉಲಮಾ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮತ್ತು ಕೆ.ಸಿ.ರೋಡ್ ಹುಸೈನ್ ಸಅದಿ ಭಾಷಣ ಮಾಡಲಿದ್ದಾರೆ. ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚೀಫ್ ಕೋ-ಆರ್ಡಿನೇಟರ್ ಎಂ.ಪಿ.ಎಂ.ಅಶ್ರಫ್ ಸಅದಿ ಮಲ್ಲೂರು, ಜನರಲ್ ಕನ್ವೀನರ್ ಅಬ್ದುರ್ರಹೀಂ ಸಅದಿ, ಮಜ್ಲಿಸುಲ್ ಉಲಮಾಯಿಸ್ಸಅದಿಯ್ಯನ್ ದ.ಕ. ಜಿಲ್ಲಾಧ್ಯಕ್ಷ ಅಬ್ದುರ್ರಹ್ಮಾನ್ ಸಅದಿ ಕಂಕನಾಡಿ, ಎ.ಎಂ.ಇಸ್ಮಾಯೀಲ್ ಸಅದಿ ಉರುಮನೆ ಉಪಸ್ಥಿತರಿದ್ದರು.