ಮಂಗಳೂರು(ದಕ್ಷಿಣ ಕನ್ನಡ): ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟದ ವತಿಯಿಂದ ‘ಸಾಹಿತ್ಯತ್ತೊ ಒಸರ್ 2024’ ಕಾರ್ಯಕ್ರಮವು ಮಂಗಳೂರು ನಗರದ ಸಹೋದಯ ಹಾಲ್ನಲ್ಲಿ ನಡೆಯಿತು.
‘ಪಾಟೆಲ್ತ್ರೊ ಒಸರ್’ ಶೀರ್ಷಿಕೆಯಡಿ 14 ಬ್ಯಾರಿ ಲೇಖಕಿಯರು ಬ್ಯಾರಿ, ತುಳು, ಕನ್ನಡದಲ್ಲಿ ಕವನಗಳನ್ನು ವಾಚಿಸಿದರು. ‘ಪಲಕತ್ತೊ ಒಸರ್’ ಶೀರ್ಷಿಕೆಯಡಿ ನಾಲ್ವರು ಲೇಖಕಿಯರು ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿಚಾರ ಮಂಡಿಸಿ ಮುಕ್ತವಾಗಿ ಚರ್ಚಿಸಿದರು.
‘ಸಾಹಿತ್ಯತ್ತೊ ಒಸರ್’ ಕಾರ್ಯಕ್ರಮವನ್ನು ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ದಫ್ ಬಾರಿ ಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು 1980ರ ಬಳಿಕ ಬ್ಯಾರಿ ಮುಸ್ಲಿಂ ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾರಿ ವಿದ್ಯಾರ್ಥಿನಿಯರು ಶಿಕ್ಷಣದಲ್ಲಿ ನಿರೀಕ್ಷೆಗೂ ಮೀರಿ ಸಾಧನೆಗೈಯ್ಯುತ್ತಿದ್ದಾರೆ. ಅದರ ಪರಿಣಾಮವೇ ಇಂದು ಅಧಿಕ ಸಂಖ್ಯೆಯಲ್ಲಿ ಬ್ಯಾರಿ ಲೇಖಕಿಯರು ಬರೆಯುವಂತಾಗಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.